ಶ್ರೀಶೈಲ ಜಗದ್ಗುರುಗಳ ದ್ವಾದಶ ಪೀಠಾರೋಹಣ :
ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ
ನವದೆಹಲಿ : ದೇಶದ ಪ್ರಸಿದ್ಧ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲ ಮಲ್ಲಿಕಾರ್ಜುನ ಕ್ಷೇತ್ರದಲ್ಲಿರುವ ಸನಾತನ ವೀರಶೈವ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಶೈಲ ಸೂರ್ಯಸಿಂಹಾಸನ ಮಹಾಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರ ಪೀಠಾರೋಹಣದ ದ್ವಾದಶ ವರ್ಧಂತಿ ಮಹೋತ್ಸವ ಮತ್ತು ಜನ್ಮ ಸುವರ್ಣಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಆಹ್ವಾನ ನೀಡಲಾಗಿದೆ.
ನವದೆಹಲಿ ಪ್ರಧಾನಿ ಗೃಹ ಕಚೇರಿಯಲ್ಲಿ ನರೇಂದ್ರ ಮೋದಿಯವರನ್ನು ಭೇಟಿಯಾದ ಶ್ರೀಶೈಲ ಜಗದ್ಗುರುಗಳು 2023ರ ಜನವರಿ 10 ರಿಂದ 15 ರವರೆಗೆ ನಡೆಯುವ 5 ದಿನಗಳ ಮಹಾಸಮ್ಮೇಳನದಲ್ಲಿ ಒಂದು ದಿನದ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಇದೇ ಅ.29 ರಿಂದ 33 ದಿನಗಳ ಕಾಲ ಬೆಳಗಾವಿ ಜಿಲ್ಲೆಯ ಸುಕ್ಷೇತ್ರ ಯಡೂರದಿಂದ ಶ್ರೀಶೈಲ ಮಹಾಕ್ಷೇತ್ರದ ವರೆಗೆ ಶ್ರೀಶೈಲ ಜಗದ್ಗುರುಗಳು 560 ಕಿ.ಮೀ. ಪಾದಯಾತ್ರೆ ನಡೆಸಲಿದ್ದು, ನಂತರ 42 ದಿನಗಳ ಕಾಲ ಶ್ರೀಶೈಲದಲ್ಲಿ ಅನುಷ್ಠಾನ ನಡೆಸಲಿದ್ದಾರೆ. ಅಂತಿಮವಾಗಿ ಜ.10 ರಿಂದ 15 ರವರೆಗೆ 5 ದಿನ ಸಮಾರೋಪ ಕಾರ್ಯಕ್ರಮ ನಡೆಯಲಿವೆ.
ಶತಮಾನದ ಹಿರಿಮೆ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನವು ಇದೇ ಮೊದಲ ಬಾರಿಗೆ ಶ್ರೀಶೈಲದಲ್ಲಿ ನಡೆಯಲಿದೆ. ಜೊತೆಗೆ ರಾಷ್ಟ್ರೀಯ ವೇದಾಂತ ಸಮ್ಮೇಳನ, ರಾಷ್ಟ್ರೀಯ ವಚನ ಸಮ್ಮೇಳನ, ವೀರಶೈವ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡಯಲಿವೆ. ದೇಶದ ವಿವಿಧ ಪ್ರಾಂತ್ಯಗಳ ಲಕ್ಷಾಂತರ ಜನರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಯದಲ್ಲಿ ಔಸಾ ದ ಡಾ. ಶಾಂತವೀರಲಿಂಗ ಶಿವಾಚಾರ್ಯರು ಹಾಗೂ ನೂಲದ ಶ್ರೀ ಗುರುಸಿದ್ಧೇಶ್ವರ ಶಿವಾಚಾರ್ಯರು ಮತ್ತು ಕೇಂದ್ರ ಸಚಿವ ಪ್ರಹ್ಲಾದ ಜೋಷಿಯವರು ಉಪಸ್ಥಿತರಿದ್ದರು.