ಚಿಕ್ಕೋಡಿ : ಅಕ್ರಮವಾಗಿ ಅಕ್ಕಿ ದಾಸ್ತಾನು ಮಾಡಿದ್ದೀರಿ ಎಂದು ಆರೋಪಿಸಿ. ಮಹಿಳೆಯ ಮನೆಗೆ ನುಗ್ಗಿ ವೀಡಿಯೋ ಚಿತ್ರೀಕರಣ ಮಾಡಿದ್ದಲ್ಲದೆ, ಹಣಕ್ಕೆ ಬೇಡಿಕೆ ಇಟ್ಟಿದ್ದ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕುರಲಿ ಗ್ರಾಮದ ಸುನಿತಾ ಪಾಟೀಲ್ ಎಂಬ ಮಹಿಳೆ‌‌ ಮನೆಗೆ ನುಗ್ಗಿದ್ದ ಮೂವರು ನಕಲಿ ಪತ್ರಕರ್ತರು ನಿಮ್ಮ ಮನೆಯಲ್ಲಿ ಅಕ್ರಮ ಅಕ್ಕಿ ದಾಸ್ತಾನು ಇದೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ ಮನೆಯಲ್ಲಿನ ದವಸ ಧಾನ್ಯದ ಚೀಲಗಳ ಚಿತ್ರೀಕರಣ ಮಾಡಿ. ಹಣ ನೀಡುವಂತೆ ಆಗ್ರಹಿಸಿದ್ದರು.

ಬಂದಿತ ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಪ್ರತಿ

ಅಮರ್ ಕೊಡತೆ ಹಾಗೂ ವಿವೇಕಾನಂದ ಕುದರಿಮಠ ಒಬ್ಬರು ಗೋಕಾಕ್ ತಾಲೂಕಿನ ಘಟಪ್ರಭಾ ಪಟ್ಟಣದವರು, ಇನ್ನೊಬ್ಬ ಆರೋಪಿ ಗಂಗಾಧರ ಶಿರಗಾವೆ ಹುಕ್ಕೇರಿ ತಾಲೂಕಿನ ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದವನು.

ಮನೆಯಲ್ಲಿ ಇಟ್ಟಿದ್ದ ದವಸ ದಾನ್ಯಗಳ ವೀಡಿಯೋ ಇಟ್ಟುಕೊಂಡು ಹಣ ನೀಡಿ, ಇಲ್ಲವಾದರೆ ನೀವು ಅಕ್ರಮ ಅಕ್ಕಿ ದಾಸ್ತಾನು ಮಾಡಿರುವುದಾಗಿ ಸುದ್ದಿ ಬಿತ್ತರಿಸುತ್ತೇವೆ ಎಂದು ದಮ್ಕಿ ಹಾಕಿದ್ದಾರೆ. ಇವರು ಮನೆಗೆ ನುಗ್ಗಿದ ಎಲ್ಲಾ ವೀಡಿಯೋ ಚಿತ್ರೀಕರಣವನ್ನು ಸುನಿತಾ ಪಾಟೀಲ್ ಮಾಡಿಕೊಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ‌.

ಈ ಘಟನೆ ಕುರಿತಂತೆ ನಿಪ್ಪಾಣಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.