ಬೆಳಗಾವಿ  : ದೀಪಾವಳಿ ಹಬ್ಬದ ಪೂಜಾ ಸಾಮಗ್ರಿಯನ್ನು ವಿಸರ್ಜನೆ ಮಾಡಲು ಹೋಗಿದ್ದ ವೇಳೆ ಇಬ್ಬರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಭಾನುವಾರ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

ಸಾಂಬ್ರಾದ ನೇತ್ರಾ ಯಲ್ಲಪ್ಪ‌ ಕೊಳವಿ(8), ಪ್ರಿಯಾ ಯಲ್ಲಪ್ಪ ಕೊಳವಿ(6)  ಮೃತ ಬಾಲಕಿಯರು. ಸಂದ್ಯಾ ಯಲ್ಲಪ್ಪ ಕೊಳವಿ ರಕ್ಷಣೆಗೊಳಗಾದ ಬಾಲಕಿ. ಮೂಲತಃ ಗೋಕಾಕ ತಾಲೂಕಿನ ಯದ್ದಲಗುಡ್ಡ ಗ್ರಾಮದವರಾಗಿದ್ದು, ಸಾಂಬ್ರಾ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ತಂದೆ ಯಲ್ಲಪ್ಪ ನಿವೃತ್ತ ಸೈನಿಕರಾಗಿದ್ದು, ನಿವೃತ್ತಿ ನಂತರ ಕಾರವಾರದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ದೀಪಾವಳಿ ನಂತರ ಕರ್ತವ್ಯಕ್ಕೆ ಹಾಜರಾಗಲು ತೆರಳಿದ್ದರು. ಇನ್ನೂ ತಾಯಿ ಕೂಡ ಅನ್ಯ ಕಾರ್ಯದ ಹಿನ್ನೆಲೆಯಲ್ಲಿ ಗೋಕಾಕಗೆ ಹೋಗಿದ್ದರು ಎನ್ನಲಾಗಿದೆ.

Video : ಅಪ್ಪು ಆಸ್ಪತ್ರೆಗೆ ಹೋಗುತ್ತಿರುವ ಕೊನೆಯ ಗಳಿಗೆ ಸಿಸಿಟಿವಿಯಲ್ಲಿ ಸೆರೆ : https://belagavivoice.com/appu_last_video/#.YYI90aVtecA.whatsapp

ಈ ವೇಳೆ ಮೂವರು‌ ಸಹೋದರಿಯರು ದೀಪಾವಳಿ ಹಬ್ಬದ ಪೂಜೆಯಲ್ಲಿನ ಸಾಮಗ್ರಿಗಳನ್ನು ವಿಸರ್ಜನೆ ಮಾಡಲು  ಸಾಂಬ್ರಾದ ಮಹಾದೇವ ಕೆರೆಗೆ ತೆರಳಿದ್ದರು.  ಈ ವೇಳೆ ಕಾಲಿಗೆ ಜಾರಿ ಮೂವರು ಸಹೋದರಿಯರು ಕೆರೆಯಲ್ಲಿ ಬಿದ್ದಿದ್ದಾರೆ. ಈ ವೇಳೆ ಸಂದ್ಯಾ ಕೆರೆಗೆ ಬಿದ್ದಿದ್ದ ಇಬ್ಬರ ಸಹೋದರಿರಯನ್ನು ರಕ್ಷಣೆ ಮಾಡಲು ಯತ್ನಿಸಿದ್ದಾಳೆ. ಈ ವೇಳೆ ನಿಯಂತ್ರಣ ತಪ್ಪಿ ಸಂಧ್ಯಾ ಕೂಡ ಕೆರೆಗೆ ಬಿದ್ದಿದ್ದಾಳೆ. ಈ ವೇಳೆ ಮೂವರಲ್ಲಿ ಓರ್ವ ಬಾಲಕಿಯನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಘಟನಾಸ್ಥಳಕ್ಕೆ ಮಾರಿಹಾಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ,‌ಪ್ರಕರಣ ದಾಖಲಿಸಿಕೊಂಡಿದ್ದಾರೆ.