ಪೊಲೀಸ್ ಸಿಬ್ಬಂದಿ ಪ್ರೇಮ ಪ್ರಕರಣ ; ಎಸ್ಪಿ ಕಚೇರಿ ತಲುಪಿದ ಖಾಕಿ ಕಿತ್ತಾಟ..!
ಯಾದಗಿರಿ : ಜಿಲ್ಲೆಯ ಶಹಾಪುರದಲ್ಲಿ ಗುಪ್ತಚರ ವಿಭಾಗದ ಪಿಎಸ್ಐ (PSI) ಆಗಿ ಕಾರ್ಯನಿರ್ವಹಿಸುತ್ತಿರುವ ವೀರೇಶ್ (Veeresh) ಹಾಗೂ ರಾಯಚೂರಿನಲ್ಲಿ ಮಹಿಳಾ ಕಾನ್ಸ್ಟೇಬಲ್ (Lady Constable) ನಡುವಿನ ಎಂಟು ವರ್ಷಗಳ ಸುದೀರ್ಘ ಸಂಬಂಧ ಈಗ ರಂಪಾಟವಾಗಿದೆ.
2017ರಲ್ಲಿ ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ಇವರ ನಡುವೆ ಪ್ರೇಮಾಂಕುರವಾಗಿತ್ತು. ನಂತರದ ದಿನಗಳಲ್ಲಿ ಇಬ್ಬರೂ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿದ್ದರು. ವೀರೇಶ್ ಪಿಎಸ್ಐ ಆಗಿ ಮತ್ತು ಈಕೆ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಬಳಿಕವೂ ಇವರ ಸಂಬಂಧ ಮುಂದುವರಿದಿತ್ತು.
ಇಬ್ಬರೂ ಸುಮಾರು ನಾಲ್ಕು ವರ್ಷಗಳ ಕಾಲ ರಾಯಚೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ದಂಪತಿಗಳಂತೆ ವಾಸವಿದ್ದರು. ಅಷ್ಟೇ ಅಲ್ಲದೆ, ಒಂದು ದೇವಸ್ಥಾನದಲ್ಲಿ ಸರಳವಾಗಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕವಾಗಿಯೂ ಒಂದಾಗಿದ್ದರು. ಆದರೆ, ಈಗ ಮಹಿಳೆ ಅವರು ಜಾತಿಯ ನೆಪವೊಡ್ಡಿ ಈ ಸಂಬಂಧವನ್ನು ನಿರಾಕರಿಸುತ್ತಿದ್ದಾರೆ ಎಂಬುದು ವೀರೇಶ್ ಅವರ ವಾದ.
ಇದನ್ನೂ ಓದಿ : ಬೆಂಗಳೂರು ಉದ್ಯೋಗಿ ವಿಚ್ಛೇದನ ಪ್ರಕರಣ, ಪತ್ನಿಗೆ ಜೀವಿತಾವಧಿಯವರೆಗೆ ಮಾಸಿಕ ₹15,000 ಜೀವನಾಂಶ ನೀಡಲು ಕೋರ್ಟ್ ಆದೇಶ
ಈ ಇಡೀ ಪ್ರಕರಣದಲ್ಲಿ ಆರ್ಥಿಕ ಮತ್ತು ನೈತಿಕ ವಂಚನೆಯ ಆರೋಪಗಳು ಕೇಳಿಬರುತ್ತಿವೆ. ಮಹಿಳೆ ಅವರು ತಮ್ಮಿಂದ ಹಂತ ಹಂತವಾಗಿ ಸುಮಾರು 35 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಾರೆ ಎಂದು ವೀರೇಶ್ ದೂರಿದ್ದಾರೆ. ಅಲ್ಲದೆ, ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಾಗ ಎರಡು ಬಾರಿ ಗರ್ಭಿಣಿಯಾಗಿದ್ದರೂ, ತನಗೆ ಮಾಹಿತಿ ನೀಡದೆಯೇ ಗರ್ಭಪಾತ ಮಾಡಿಸಿಕೊಂಡಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಈ ಜೋಡಿಯ ಪ್ರೀತಿಯ ಪಯಣ ಈಗ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ತಲುಪಿದೆ. ಇಷ್ಟೆಲ್ಲಾ ವರ್ಷಗಳ ಕಾಲ ಜೊತೆಗಿದ್ದ ಮಹಿಳೆ ಈಗ ವೀರೇಶ್ ಅವರ ಕೈಬಿಟ್ಟು, ಮೇ 7 ರಂದು ಮತ್ತೊಬ್ಬ ಯುವಕನೊಂದಿಗೆ ವಿವಾಹವಾಗಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ತನಗೆ ನ್ಯಾಯ ಸಿಗಬೇಕು ಮತ್ತು ಈ ಮದುವೆಯನ್ನು ತಡೆಯಬೇಕು ಎಂದು ಕೋರಿ ಪಿಎಸ್ಐ ವೀರೇಶ್ ರಾಯಚೂರು ಎಸ್ಪಿ ಅವರಿಗೆ ಆನ್ಲೈನ್ ಮೂಲಕ ದೂರು ಸಲ್ಲಿಸಿದ್ದಾರೆ.

