
ಅಥಣಿ ಪೊಲೀಸರ ಕಾರ್ಯವೈಖರಿಗೆ ಎಸ್ಪಿ ಶ್ಲಾಘನೆ – ಕಳ್ಳತನ ಆರೋಪಿ ಹಿಡಿಯುವಲ್ಲಿ ಖಾಕಿ ಯಶಸ್ವಿ

ಅಥಣಿ : ಪಟ್ಟಣದ ಕಾಂಕ್ರೀಟ್ ಮಿಕ್ಸಿಂಗ್ ಘಟಕದಲ್ಲಿ ನಿಲ್ಲಿಸಲಾಗಿದ್ದ ಟಿಪ್ಪರ ವಾಹನದ 6 ಗಾಲಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಹಲವೆಡೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದು, ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಅನಂತಪುರ ಗ್ರಾಮದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಆರೋಪಿ ಕುಮಾರ ದಶರಥ ಥೈಲರ್ ಎಂಬಾತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಒಂದು ತಿಂಗಳ ಹಿಂದೆ ಟಿಪ್ಪರಗಳ ಟೈಯರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿತನಿಂದ ಸುಮಾರು 2 ಲಕ್ಷ 40 ಸಾವಿರ ರೂ. ಮೌಲ್ಯದ ಡಿಸ್ಕ್ ಸಮೇತ 6 ಟೈಯರಗಳನ್ನು ಮತ್ತು ಕಳ್ಳತನಕ್ಕೆ ಬಳಸಿದ ಮಹಾರಾಷ್ಟ್ರ ರಾಜ್ಯದ ನೋಂದಣಿ ಸಂಖ್ಯೆ ಹೊಂದಿರುವ ಸು. 2 ಲಕ್ಷ 50 ಸಾವಿರ ರೂ. ಮೌಲ್ಯದ ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನವನ್ನು ಪಡೆದುಕೊಂಡಿದ್ದಾರೆ.

ಅಥಣಿ ಡಿವೈಎಸ್ಪಿ ಶ್ರೀಪಾದ್ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ ಮಾರ್ಗದರ್ಶನದಲ್ಲಿ ಅಥಣಿ ಪಿಎಸ್ಐ ಶಿವಶಂಕರ ಮಕರಿ, ಅಪರಾಧ ವಿಭಾಗದ ಪಿಎಸ್ಐ ರಾಕೇಶ ಬಗಲಿ, ಎಎಸ್ಐ ವಿ.ಜಿ ಅರೇರ್, ಸಿಬ್ಬಂದಿಗಳಾದ ಬಿ ಜೆ. ತಳವಾರ, ಬಿ ವಿ.ನಾಯಕ, ಎ ಎ ಈರ್ಕರ, ಜೆ. ಎಚ್ ಡಾoಗೆ, ಎಂ. ಎ. ಪಾಟೀಲ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಅಥಣಿ ಪೊಲೀಸರ ಈ ಕಾರ್ಯ ಸಾಧನೆಗೆ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದು, ಕಾರ್ಯವೈಖರಿಯ ಸಾಧನೆಗೆ ಬಹುಮಾನ ಕೂಡ ಘೋಷಿಸಿದ್ದಾರೆ.
