
ಹಾರ ಬದಲಿಸುವಾಗ ವರನ ಕೈ ತಾಗಿದ್ದಕ್ಕೆ ಮದುವೆ ಬೇಡವೆಂದ ಯುವತಿ

ಬೆಳ್ತಂಗಡಿ : ಮದುವೆ ವೇಳೆ ಹಾರ ಬದಲಿಸುವಾಗ ವರನ ಕೈ ಟಚ್ ಆಗುದ್ದಕ್ಕೆ ಯುವತಿ ಮದುವೆ ನಿರಾಕರಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ನಡೆದಿದೆ.
ಮೇ 25ರಂದು ಬೆಳ್ತಂಗಡಿ ತಾಲೂಕಿನ ಮೂಡುಕೊಣಾಜೆ ಗ್ರಾಮದ ಯುವತಿಗೆ ಅದೇ ತಾಲೂಕಿನ ನಾರಾವಿ ಗ್ರಾಮದ ಯುವಕನೊಂದಿಗೆ ಮದುವೆ ನಿಶ್ಚಯ ಆಗಿತ್ತು. ನಾರಾವಿ ಸಭಾ ಭವನವೊಂದರಲ್ಲಿ ಮೇ 25ಕ್ಕೆ ಮದುವೆ ನಿಗದಿಯಾಗಿತ್ತು. ಸುಮಾರು 500ಕ್ಕೂ ಹೆಚ್ಚು ಮಂದಿಗೆ ಸಿಹಿಯೂಟದ ವ್ಯವಸ್ಥೆ ಮಾಡಲಾಗಿತ್ತು.
ಮದುವೆ ಶಾಸ್ತ್ರ ನಡೆಯುತ್ತಿದ್ದಂತೆ ಅರ್ಚಕರು ಹಾರ ಬದಲಿಸುವಂತೆ ಸೂಚಿಸಿದ್ದಾರೆ. ಅದರಂತೆ ವರ ಹಾರವನ್ನು ವಧುವಿನ ಕುತ್ತಿಗೆಗೆ ಹಾಕುತ್ತಿದ್ದಂತೆ ವಧು ರೊಚ್ಚಿಗೆದ್ದಿದ್ದಾಳೆ. ವರ ಹಾರ ಹಾಕುವಾಗ ವಧುವಿನ ಕೊರಳಿಗೆ ಕೈ ತಾಗಿದೆಯೆಂದು ಸಿಟ್ಟಿಗೆದ್ದ ವಧು ಮಂಟಪದಿಂದ ಹೊರನಡೆಯಲು ಮುಂದಾಗುತ್ತಿದ್ದಂತೆ ಸಂಬಂಧಿ ಕರು ಸಮಾಧಾನಪಡಿಸಿದ್ದಾರೆ. ಆದರೆ ಘಟನೆಯಿಂದ ಅವಮಾನಕ್ಕೊಳಗಾದ ವರನ ಕಡೆ ಯವರು ಮದುವೆಯನ್ನು ನಿರಾಕರಿಸಿದ್ದಾರೆ.
ಹೆಣ್ಣು ಗಂಡಿನ ಕಡೆಯವರು ಮಾತಿಗೆ ಮಾತು ಬೆಳೆಸಿಕೊಂಡಿದ್ದು, ಸಣ್ಣ ಮಟ್ಟಿನ ಜಗಳ ಪ್ರಾರಂಭ ಆದಾಗ ವೇಣೂರು ಪೊಲೀಸರು ಆಗಮಿಸಿದ್ದಾರೆ. ಎರಡೂ ಕಡೆಯವರಿಗೆ ಮಾತುಕತೆಗೆ ಪೊಲೀಸರು ಅವಕಾಶ ಮಾಡಿಕೊಟ್ಟರೂ ಸಂಬಂಧ ಬೆಸೆಯದೆ ಮದುವೆ ಮುರಿದುಬಿದ್ದಿದೆ. ತಯಾರಾಗಿದ್ದ ಊಟವನ್ನು ಸ್ಥಳೀಯ ಶಾಲೆಗಳಿಗೆ ನೀಡಿರುವುದಾಗಿ ತಿಳಿದು ಬಂದಿದೆ.