ಜೊತೆಯಾಗಿ ಬೆಂಗಳೂರಿಗೆ ಬಂದ ಮೋದಿ ವಿರೋಧಿಗಳು ಒಂದಾಗಿ ಸಾಗುವುದು ಡೌಟ್…!
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಈ ದೇಶದ ಚುಕ್ಕಾಣಿ ಹಿಡಿದು ಒಂಬತ್ತು ವರ್ಷ ಮುಕ್ತಾಯವಾಗಿದ್ದು ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭಾ ಚುನಾವಣಾ ಯುದ್ಧ ನಡೆಯಲಿದೆ. ಈಗಾಗಲೇ ಮೋದಿ ವಿರೋಧಿ ಬಣ ಒಂದುಗೂಡಿ ಬೆಂಗಳೂರಿನಲ್ಲಿ ಸಭೆ ನಡೆಸಿದ್ದು ಮಾತ್ರವಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಮೋದಿಯನ್ನ ಸೋಲಿಸುವ ಲೆಕ್ಕಾಚಾರದ ಕನಸು ಕಾಣುತ್ತಿವೆ.
ಹಾಗಾದರೇ ಬಿಜೆಪಿ ವಿರೋಧಿ ಬಣಗಳು ಒಗ್ಗಟ್ಟಿನಿಂದ ಚುನಾವಣೆ ನಡೆದರೆ ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಬಹುದಾ ಎಂಬ ಪ್ರಶ್ನೆಗೆ ಈವರೆಗೂ ಉತ್ತರವಿಲ್ಲ. ಇತ್ತ ವಿರೋಧಿ ಬಣ ಅವರನ್ನು ಸೋಲಿಸಲು ಸಭೆ ಮೇಲೆ ಸಭೆ ಮಾಡುತ್ತಿದ್ದರೆ ಅತ್ತ ಪ್ರಧಾನಿ ನರೇಂದ್ರ ಮೋದಿ ಬೇರೆ ರಾಷ್ಟ್ರಗಳ ಜೊತೆ ಸಭೆ ನಡೆಸುವ ಮೂಲಕ ದೇಶದ ಪರ ಕೆಲಸ ಮಾಡುತ್ತಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಿಂದ ಬಿಜೆಪಿ ವಿರೋಧಿ ಬಣದ ಸುಮಾರು 20 ಕ್ಕೂ ಅಧಿಕ ಪಕ್ಷಗಳ ಮುಖಂಡರನ್ನು ಒಳಗೊಂಡ ಮಹಾ ಘಟಬಂಧನ ಸಭೆ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ.
ಆದರೆ ಈ ಸಭೆಯಲ್ಲಿ ಪಾಲ್ಗೊಂಡ ಅನೇಕ ರಾಜ್ಯದ ನಾಯಕರು ಯಾವ ರೀತಿಯಲ್ಲಿ ತಮ್ಮ ಪಕ್ಷದ ವಿರೋಧಿಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತಿಲ್ಲ. ಉತ್ತರ ಪ್ರದೇಶ, ಬಿಹಾರ, ದೇಹಲಿ, ಪಂಜಾಬ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅಸ್ತಿತ್ವವೇ ಇಲ್ಲದ ಕಾಂಗ್ರೆಸ್ ಜೊತೆ ಕೈ ಜೋಡಿಸಿದರೆ ಏನು ಲಾಭ ಎಂವ ದ್ವಂದ್ವ ಕೂಡಾ ಎಡಪಕ್ಷಗಳಲ್ಲಿ ಇವೆ.
ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ. ಜಾರ್ಖಂಡ್ ಸಿಎಂ ಹೇಮಂತ್ ಸುರೇನ್, ಜಮ್ಮು ಮತ್ತು ಕಾಶ್ಮೀರ ಮಾಜಿ ಸಿಎಂ ಓಮರ್ ಅಬ್ದುಲ್ಲ ತಾಜ್ ಹೋಟೆಲ್ ಗೆ ಆಗಮಸಿದ್ದಾರೆ. ಇವರಲ್ಲದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಶಿವಸೇನೆಯ ಆದಿತ್ಯಾ ಠಾಕ್ರೆ, ಉದ್ದವ್ ಠಾಕ್ರೆ, ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪಂಜಾಬ್ ಸಿಎಂ ಭಗವಂತ್ ಮಾನ್,ಬಿಹಾರ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಸುಮಾರು 20 ಪಕ್ಷಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದಾರೆ.
ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಮಹಾ ಘಟಬಂಧನದ ಸಾರಥಿ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ ಬಿಹಾರದಲ್ಲಿ ಆರ್ ಜೆ ಡಿಯ ಲಾಲು ಪ್ರಸಾದ್ ಯಾದವ್ ಜೊತೆ ಕೈ ಜೋಡಿಸಲು ನಿತೇಶ್ ಕುಮಾರ್ ಅವರಿಗೆ ಸ್ವ ಪಕ್ಷದ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಲಾಲು ಪ್ರಸಾದ್ ಯಾದವ್ ಕನಸು ಕಂಡಂತೆ ತನ್ನ ಮಗನನ್ನು ಸಿಎಂ ಕುರ್ಚಿಗೆ ತಗೆದುಕೊಂಡು ಹೋಗುವ ಲೆಕ್ಕಾಚಾರವೇ ಹೆಚ್ಚು ಎದ್ದು ಕಾಣುತ್ತಿದ್ದು, ಮಹಾ ಘಟಬಂಧನ ಬಿಹಾರದಿಂದಲೇ ಪಂಕ್ಚರ್ ಆಗುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.
ಇದೇ ಪರಿಸ್ಥಿತಿ ಉತ್ತರ ಪ್ರದೇಶದಲ್ಲಿಯೂ ಇದೆ. ಬಿಎಸ್ಪಿ ನಾಯಕಿ ಮಾಯಾವತಿ ಹಾಗೂ ಎಸ್ಪಿ ನಾಯಕ ಅಖಿಲೇಶ್ ಯಾದವ್ ಒಟ್ಟಿಗೆ ಹೋದರೆ ಅಲ್ಲಿನ ಜನ ಸಪೋರ್ಟ್ ಮಾಡುವುದು ಅನುಮಾನ. ದಶಕಗಳಿಂದ ಎರಡು ಪಕ್ಷದ ಕಾರ್ಯಕರ್ತರು ವೈರತ್ವ ಸಾಧಿಸಿದ್ದು, ಇಬ್ಬರು ಜಗಳ ಮರೆತು ಒಂದಾಗುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಜೊತೆಗೆ ಉತ್ತರ ಪ್ರದೇಶಲ್ಲಿ ಶಕ್ತಿ ಕಳೆದುಕೊಂಡ ಕಾಂಗ್ರೆಸ್ ಜೊತೆ ಸೇರಿದರೆ ಈ ಎರಡೂ ಪಕ್ಷಗಳಿಗೆ ಬರುವ ಲಾಭದಲ್ಲಿ ನಷ್ಟ ಸಾಧ್ಯತೆ.
ಇದೆ ಪರಿಸ್ಥಿತಿ ದೇಹಲಿ ಹಾಗೂ ಪಂಜಾಬ್ ಮತ್ತು ಪಶ್ಚಿಮ ಬಂಗಾಳದಲ್ಲಿದೆ. ಕಮ್ಯುನಿಸ್ಟರ ವಿರುದ್ಧ ನಿರಂತರ ಹೋರಾಟ ಮಾಡಿದ್ದ ಮಮತಾ ಬ್ಯಾನರ್ಜಿಯವರು ವಿರೋಧಿಗಳ ಜೊತೆ ಸೇರುವುದು ಅನುಮಾನ. ಇನ್ನೂ ಅನೇಕ ರಾಜ್ಯಗಳಲ್ಲಿ ಸ್ವಂತ ಬಲ ಇಲ್ಲದ ಕಾಂಗ್ರೆಸ್ ಜೊತೆ ಸೇರಿದರೆ ಮಹಾ ಘಟಬಂಧನಕ್ಕೆ ಜೀವ ಬರುವುದು ಎಲ್ಲಿಂದ ಎಂಬ ಪ್ರಶ್ನೆ ಮೂಡಿದ್ದು ಸುಳ್ಳಲ್ಲ. ಜೊತೆಯಾಗಿ ಬೆಂಗಳೂರಿಗೆ ಬಂದ ಮೋದಿ ವಿರೋಧಿಗಳು ಒಂದಾಗಿ ಸಾಗುವುದು ಡೌಟ್…!


