ಬೆಂಗಳೂರು : ವಿಧಾನಸಭೆ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಮಾಜಿ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್ ಒಡೆತನದ ಅಥಣಿ ಶುಗರ್ಸ್ ವಿರುದ್ಧ ಗಂಭೀರ ಆರೋಪ ಮಾಡಿದರು.

ಅಥಣಿ ಶುಗರ್ಸ್ ಕಾರ್ಖಾನೆಯಿಂದ ಹೊರಬರುವ ಕಲುಷಿತ ನೀರು ಕೆರೆ, ಬೋರ್ ವೆಲ್, ಹಾಗೂ ಜನರ ಜಮೀನುಗಳಿಗೆ ಸೇರಿವುದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಸಕ್ಕರೆ ಸಚಿವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕಾಗವಾಡ ಮತಕ್ಷೇತ್ರದಲ್ಲಿ ಮೂರು ಸಕ್ಕರೆ ಕಾರ್ಖಾನೆ ಇದ್ದು ಇವುಗಳಿಂದ ಕಲುಷಿತ ನೀರು ನದಿಗೆ ಬಿಡಲಾಗುತ್ತಿದೆ. ಇದರಿಂದ‌ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಕೂಡಲೇ ಕ್ರಮ‌ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್. ಸಕ್ಕರೆ ಕಾರ್ಖಾನೆಗಳಿಂದ ಕಲುಷಿತ ನೀರು ಹೊರಬಿಡುವ ಕುರಿತು ಸಂಬಂಧಪಟ್ಟ ಕಾರ್ಖಾನೆಗೆ ನೋಟಿಸ್ ನೀಡಲಾಗಿದೆ. ಇದೇ ತಪ್ಪು ಮುಂದುವರಿದರೆ ಖಂಡಿತ ಕ್ರಮ‌ ಕೈಗೊಳ್ಳುತ್ತೇವೆ ಎಂಬ ಬರವಸೆ ನೀಡಿದರು‌.

ಒಟ್ಟಿನಲ್ಲಿ ಮಾಜಿ ಬಿಜೆಪಿ ಶಾಸಕರ ವಿರುದ್ಧ ಹಾಲಿ ಕಾಂಗ್ರೆಸ್ ಶಾಸಕ ರಾಜು ಕಾಗೆ ಸದನದಲ್ಲಿ ಆಕ್ರೋಶ ಹೊರ ಹಾಕುವ ಮೂಲಕ ಅಥಣಿ ಶುಗರ್ಸ್ ಅವಾಂತರ ಕುರಿತು ಗಮನಸೆಳೆದಿದ್ದಾರೆ.