ಬೆಂಗಳೂರು ಮಹಾಮಳೆಗೆ 9 ಮಂದಿ ಸಾವು ; ಕೇಂದ್ರ ಹಾಗೂ ರಾಜ್ಯದಿಂದ ಪರಿಹಾರ…!
ಬೆಂಗಳೂರು : ಬುಧವಾರ ಸಂಜೆ ಸುರಿದ ಭಾರೀ ಮಳೆ ಸಿಲಿಕಾನ್ ಸಿಟಿಯನ್ನು ತತ್ತರಗೊಳಿಸಿದ್ದು, ಮಳೆಯಿಂದಾಗಿ ಸೃಷ್ಟಿಯಾದ ಅವಾಂತರಗಳಿಗೆ ಒಟ್ಟು 9 ಮಂದಿ ಜೀವ ಕಳೆದುಕೊಂಡಿದ್ದಾರೆ.
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿತದಲ್ಲಿ 7 ಮಂದಿ ಮೃತಪಟ್ಟರೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಸಮೀಪ ವಿದ್ಯುತ್ ಪ್ರವಹಿಸಿ ಒಬ್ಬರು ಹಾಗೂ ಜೆಪಿ ನಗರದಲ್ಲೂ ವಿದ್ಯುತ್ ಸ್ಪರ್ಶದಿಂದ ಮತ್ತೊಬ್ಬರು ಮೃತಪಟ್ಟಿದ್ದಾರೆ.
ಭಾರತ ಹವಾಮಾನ ಇಲಾಖೆ (IMD) ಪ್ರಕಾರ, ಬೆಳಗ್ಗೆ 8.30ರಿಂದ ರಾತ್ರಿ 8.30ರವರೆಗೆ ನಗರದಲ್ಲಿ ಒಟ್ಟು 111 ಮಿಮೀ ಮಳೆಯಾಗಿದ್ದು, ಇದು ಏಪ್ರಿಲ್ ತಿಂಗಳಲ್ಲಿಯೇ ಇದುವರೆಗೆ ದಾಖಲಾಗಿದ್ದ ಅತಿ ಹೆಚ್ಚು ಮಳೆಯಾಗಿದೆ ಎಂದು ತಿಳಿಸಿದೆ. ಇದಕ್ಕೂ ಮೊದಲು 2001ರ ಏಪ್ರಿಲ್ 19ರಂದು 108.6 ಮಿಮೀ ಮಳೆಯಾಗಿದ್ದ ದಾಖಲೆ ಇತ್ತು.
ಗುರುವಾರ ಸಂಜೆ ಮಿಂಚು-ಗುಡುಗು ಹಾಗೂ ಆಲಿಕಲ್ಲು ಸಹಿತ ಕೇವಲ ಒಂದು ಗಂಟೆಯಲ್ಲಿ 8 ಸೆಂ.ಮೀ (80 ಮಿಮೀ) ಮಳೆಯಾಗಿದ್ದು, ಗಂಟೆಗೆ 75 ಕಿಮೀ ವೇಗದ ಗಾಳಿ ಬೀಸಿರುವುದು ದಾಖಲಾಗಿದೆ.
ಮೃತರ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಹಾಗೂ ಕೇಂದ್ರದಿಂದ ಮೃತರಿಗೆ 2 ಲಕ್ಷ ಹಾಗೂ ಗಾಯಾಳುಗಳಿಗೆ 50 ಸಾವಿರ ರೂ. ಘೋಷಣೆ ಮಾಡಲಾಗಿದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

