
ಮಹತ್ವದ ಹುದ್ದೆ ಅಲಂಕರಿಸಿದ ಮಾಜಿ ಸಚಿವರ ಪುತ್ರ ಯೋಗೇಶ ಪಾಟೀಲ್

ಕಾಗವಾಡ: ಸಧ್ಯದ ಪರಿಸ್ಥಿತಿಯಲ್ಲಿ ಸಕ್ಕರೆ ಉದ್ಯಮ ಸಂಕಷ್ಟ ಎದುರಿಸುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಈ ಕುರಿತು ಮನವರಿಕೆ ಮಾಡಿ ಸೂಕ್ತ ನೀತಿಗಳನ್ನು ರೂಪಿಸುವ ಮೂಲಕ ಉದ್ಯಮದ ಯಶಸ್ಸಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘ (ಕರ್ನಾಟಕ) ದ ಅಧ್ಯಕ್ಷ ಹಾಗೂ ಅಥಣಿ ಶುಗರ್ ವ್ಯವಸ್ಥಾಪಕ ನಿರ್ದೇಶಕ ಯೋಗೇಶ ಪಾಟೀಲ್ ಅಭಿಪ್ರಾಯಪಟ್ಟರು.
ಸೋಮವಾರ ತಾಲೂಕಿನ ಕೆಂಪವಾಡದ ಅಥಣಿ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ನಿರ್ದೇಶಕ ಯೋಗೇಶ ಪಾಟೀಲ್ ಅವರಗೆ ನಡೆದ ಅಭಿನಂದನಾ ಸಮಾರಂಭ ಉದ್ದೇಶಿಸಿ ಮಾತನಾಡಿದ ಇವರು. ನಮ್ಮ ತಂದೆ ನನಗೆ ನೀಡಿರುವ ಮಾರ್ಗದರ್ಶನದಿಂದಾಗಿ ನಾನು ಇಂದು ಈ ಹುದ್ದೆಗೆ ಏರಲು ಸಾಧ್ಯವಾಗಿದೆ. ಇವರ ಮಾರ್ಗದರ್ಶನ ಪಡೆದು ಸಂಕಷ್ಟದಲ್ಲಿರುವ ಸಕ್ಕರೆ ಉದ್ಯಮದ ಯಶಸ್ಸಿಗೆ ಶ್ರಮಿಸುವೆ ಎಂದರು.
ಅಥಣಿ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಮಾತನಾಡಿ. ತಂದೆಯವರ ಮಾರ್ಗದರ್ಶನದಲ್ಲಿ ಮೂವರು ಸಹೋದರರು ಯಶಸ್ವಿಯಾಗಿ ಬದುಕು ಕಟ್ಟಿಕೊಂಡಿದ್ದೇವೆ. ಅವರಿಂದ ನಾವು ಪ್ರಾಮಾಣಿಕತೆ, ನಿಷ್ಠೆ, ಸತ್ಯದ ಮಾರ್ಗದಲ್ಲಿ ನಡೆದುಕೊಳ್ಳುವುದನ್ನು ಕಲಿತಿದ್ದೇವೆ. ಸಹೋದರ ಯೋಗೇಶ ಪಾಟೀಲ್ ಅವರಿಗೆ ದಕ್ಷಿಣ ಭಾರತ ಸಕ್ಕರೆ ಕಾರ್ಖಾನೆಗಳ ಸಂಘದ ಕರ್ನಾಟಕ ರಾಜ್ಯದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ನಮ್ಮ ಕುಟುಂಬಕ್ಕೆ ಸಂತೋಷ ತರಿಸಿದೆ ಎಂದರು.
ಮಾಜಿ ಸಚಿವ ಶ್ರೀಮಂತ ಪಾಟೀಲ್ ಮಾತನಾಡಿ, ಕಬ್ಬು ಕಟಾವು ಕಾರ್ಮಿಕರ ಮತ್ತು ಕಾರ್ಖಾನೆ ಕಾರ್ಮಿಕರ ಜೀವನ ಮಟ್ಟ ಸುಧಾರಿಸಿ, ಕಾರ್ಖಾನೆಗಳ ಆರ್ಥಿಕ ಮಟ್ಟ ಇನ್ನಷ್ಟು ಪ್ರಗತಿ ಹೊಂದಬೇಕು. ಈ ನಿಟ್ಟಿನಲ್ಲಿ ಯೋಗೇಶ ಪಾಟೀಲ ಅವರು ಕೈಗೊಳ್ಳುವ ಉತ್ತಮ ಕ್ರಮಗಳು ಇಡೀ ಭಾರತಕ್ಕೆ ಮಾದರಿಯಾಗಬೇಕು. ಅವರು ದಕ್ಷಿಣ ಭಾರತದ ಜೊತೆಗೆ ಭಾರತೀಯ ಸಕ್ಕರೆ ಕಾರ್ಖಾನೆಗಳ ಸಂಘದ ಅಧ್ಯಕ್ಷರಾಗಿ ಅಧಿಕಾರ ವಹಿಸಲಿ ಎಂದು ಶುಭ ಹಾರೈಸಿದರು.
ಅಥಣ ಶುಗರ್ಸ ನಿರ್ದೇಶಕ ಅಬ್ದುಲ್ ಬಾರಿ ಮುಲ್ಲಾ ಸ್ವಾಗತಿಸಿದರು. ಈ ವೇಳೆ ಮುಖಂಡರಾದ ಅಪ್ಪಾಸಾಹೇಬ ಅವತಾಡೆ, ಗಜಾನನ ಮಂಗಸೂಳಿ, ಉತ್ತಮ ಪಾಟೀಲ, ಗಿರೀಶ ಬುಟಾಳಿ, ಡಾ. ಪ್ರಕಾಶ ಕುಮಠಳ್ಳಿ, ರವಿ ಪೂಜಾರಿ, ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ಮಹಾವೀರ ಕಾತ್ರಾಳೆ, ಅರುಣ ಗಣೇಶವಾಡಿ, ಗಜಾನನ ಯರಂಡೋಲಿ, ನಿಂಗಪ್ಪ ಖೋಕಲೆ, ಅಪ್ಪಾಸಾಬ ಮಳಮಳಸಿ, ರಾಜೇಂದ್ರ ಪೊತದಾರ, ಉತ್ಕರ್ಷ ಪಾಟೀಲ, ಪ್ರಕಾಶ ಹಳ್ಳೊಳ್ಳಿ, ಅಭಯ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.