
ಕುಡಚಿ & ರಾಯಬಾಗ ಕ್ಷೇತ್ರದ ಮೇಲೆ ಸಾಹುಕಾರ್ ಕಣ್ಣು ; ಅಳಗವಾಡಿಯಲ್ಲಿ ಮನೆ ಮಾಡುವೆ ಎಂದ ಸಚಿವ ಸತೀಶ್

ಬೆಳಗಾವಿ : ಮುಂಬರುವ ಚುನಾವಣೆ ಹೊತ್ತಿಗೆ ಕುಡಚಿ ಹಾಗೂ ರಾಯಬಾಗ ಕ್ಷೇತ್ರ ಮೀಸಲು ಕ್ಷೇತ್ರದಿಂದ ಬದಲಾವಣೆಯಾಗಿ ಸಾಮಾನ್ಯ ಕ್ಷೇತ್ರಗಳಾಗುತ್ತವೆ. ಈ ಸಂದರ್ಭದಲ್ಲಿ ನಾವೂ ಎರಡೂ ಕ್ಷೇತ್ರದ ಮೇಲೆ ಟವಲ್ ಹಾಕುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಸೋಮವಾರ ಬೆಳಗಾವಿ ನಗರ ಕಾಂಗ್ರೆಸ್ ಭವನದಲ್ಲಿ ಸುದ್ದಿಘೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು. ಮುಂಬರುವ ವಿಧಾನಸಭಾ ಚುನಾವಣೆಗಳಲ್ಲಿ ಕುಡಚಿ ಹಾಗೂ ರಾಯಬಾಗ ಕ್ಷೇತ್ರ ಜನರಲ್ ಆಗಲಿವೆ, ನಾವು ಈಗಿನಿಂದಲೇ ಟವಲ್ ಹಾಕಿದ್ದೇವೆ. ಉತ್ತಮ ಕಾರ್ಯಕರ್ತ ಇದ್ದರೆ ಅವಕಾಶ ನೀಡುತ್ತೇವೆ. ಎರಡೂ ಕ್ಷೇತದ ಮಧ್ಯೆ ಅಳಗವಾಡಿಯಲ್ಲಿ ಮನೆ ಮಾಡುತ್ತೇವೆ ಎಂದರು.
ಕುಡಚಿ ಕ್ಷೇತ್ರದ ಶಾಸಕರಿಗೆ ಹಿಂದಿನಿಂದ ಯಾರೋ ಹೇಳಿರುವ ಕಾರಣಕ್ಕೆ ಅಅವರು ಲೋಕಸಭಾ ಚುನಾವಣೆಯಲ್ಲಿ ನಮಗೆ ವಿರೋಧ ಮಾಡಿದ್ದಾರೆ. ಅವರಿಗೆ ತಿಳಿ ಹೇಳುವ ಕೆಲಸ ಮಾಡಿದ್ದೇವೆ ಎಂದರು.
ಕೆಪಿಸಿಸಿ ಅಧ್ಯಕ್ಷ ಬದಲಾವಣೆಯ ಕುರಿತು ಹೈಕಮಾಂಡ್ ಚರ್ಚೆ ಮಾಡಬೇಕು. ಅಧ್ಯಕ್ಷರಾಗಲು ಸಾಕಷ್ಟು ಜನ ಆಕಾಂಕ್ಷಿಗಳಿದ್ದಾರೆ ಅಂತಿಮವಾಗಿ ಪಕ್ಷ ನಿರ್ಧಾರ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಚುನಾವಣೆ ದೂರ ಇದೆ. ಪಕ್ಷ ಸಂಘಟನೆ ಮಾಡುವವರನ್ನು ಹೈಕಮಾಂಡ್ ತೀರ್ಮಾನ ಮಾಡಬೇಕು. ನಾವು ಮನವಿ ಕೊಟ್ಟಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ದೆಹಲಿಯಲ್ಲಿ ಹೋದಾಗ ಬೇರೆ ಬೇರೆ ಇಲಾಖೆಯ ಕೇಂದ್ರ ಸಚಿವರಿಗೆ ಭೇಟಿಯಾಗಿ ಬಂದಿದ್ದೇವೆ. ಎಐಸಿಸಿ ಅಧ್ಯಕ್ಷರಗೆ ಭೇಟಿಯಾದಾಗ ರಾಜಕೀಯ ಮಾಡುವುದು ಸಹಜ ಎಲ್ಲರೂ ಮಾಡಿಯೇ ಮಾಡುತ್ತಾರೆ ಎಂದರು.
ಹೆಚ್ಚುವರಿ ಡಿಸಿಎಂ ಮಾಡುವ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕು. ಪ್ರತಿ ದಿನ ಡಿಸಿಎಂ, ಅಧ್ಯಕ್ಷರ ಬದಲಾವಣೆ ಕೂಗಿನಿಂದ ವಿಪಕ್ಷಗಳಿಗೆ ಅದು ಆಹಾರವಾಗಿದೆ ಎಂದರು.
ಶಾಸಕ ಆಸೀಫ್ ಸೇಠ್, ಬೆಳಗಾವಿ ಗ್ಯಾರಂಟಿ ಯೋಜನೆ ಅಧ್ಯಕ್ಷ ವಿನಯ ನಾವಲಗಟ್ಟಿ, ರಾಜೇಂದ್ರ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.