
ಚಿತ್ರಕಲಾ ಸ್ಪರ್ಧೆ ಆಯೋಜನೆ

ಆನೇಕಲ್ : ಮಕ್ಕಳಲ್ಲಿ ಅಡಗಿರುವ ಕ್ರಿಯಾಶೀಲ ಕೌಶಲವನ್ನು ಹೊರಗೆಡವಲು ಚಿತ್ರಕಲಾ ಸ್ಪರ್ಧೆ ಅತ್ಯಂತ ಉಪಯುಕ್ತ. ಇಂತಹ ಕಲಾತ್ಮಕ ಸ್ಪರ್ಧೆಯಿಂದ ವಿದ್ಯಾರ್ಥಿಗಳಿಗೆ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯ ಸಂಸ್ಥಾಪಕರಾದ ಆರ್. ರಾಮಚಂದ್ರಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಸೋಳ್ಳೆಪುರ ಗ್ರಾಮದ ಜ್ಞಾನ ಜ್ಯೋತಿ ಪಬ್ಲಿಕ್ ಶಾಲೆಯಲ್ಲಿ 1 ರಿಂದ 8 ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ
ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಇವರು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದು ಕೌಶಲ್ಯ ಅಡಗಿರುತ್ತದೆ. ಅದನ್ನು ಹೊರತೆಗೆಯುವ ಕೆಲಸ ಶಿಕ್ಷಕ
ಮಾಡಬೇಕಾಗುತ್ತದೆ. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸುವುದರಿಂದ ಅವರಲ್ಲಿ ಪ್ರಾಣಿ, ಪಕ್ಷಿ, ಪರಿಸರ ಸೇರಿದಂತೆ ಹೊಸ ವಿಷಯಗಳ ಮೇಲೆ ಆಸಕ್ತಿ ಮೂಡುತ್ತದೆ. ಕೇವಲ ಪಠ್ಯಪುಸ್ತಕ ಒತ್ತಡವನ್ನು ಮಕ್ಕಳ ಮೇಲೆ ಹೇರದೆ ಈ ರೀತಿಯ ಪಠ್ಯೇತರ ಚಟುವಟಿಕೆ ನಡೆಸುವುದು ಉತ್ತಮ ಎಂದರು.
ಚಿತ್ರಕಲಾ ಸ್ಪರ್ಧೆಯಲ್ಲಿ 6 ನೇ ತರಗತಿ ವಿದ್ಯಾರ್ಥಿ ಶ್ರವಂತ್ ಪ್ರಥಮ ಸ್ಥಾನ, ಇದೇ ತರಗತಿ ವಿದ್ಯಾರ್ಥಿನಿ ಯಶ್ಮಿತಾ ದ್ವಿತೀಯ ಸ್ಥಾನ, 7 ನೇ ತರಗತಿ ವಿದ್ಯಾರ್ಥಿನಿ ಚಾರುಲೇಖ ತೃತೀಯ ಹಾಗೂ 5 ನೇ ತರಗತಿ ವಿದ್ಯಾರ್ಥಿನಿ ಬೃಂದಾಶ್ರೀ ನಾಲ್ಕನೆ ಸ್ಥಾನ ಪಡೆದು ಬಹುಮಾನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಜಯ್ ಎಸ್.ಆರ್ ಖಜಾಂಚಿ ಚಂದ್ರಿಕಾ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.