ಎತ್ತು ಸಾವು ; ಪತ್ನಿ ಹೆಗಲಿಗೆ ನೊಗ ಹೊರಿಸಿ ರೈತನ ಉಳುಮೆ
ಮಹಾರಾಷ್ಟ್ರ : ದೇಶಕ್ಕೆ ಅನ್ನ ನೀಡುವ ಬಡ ರೈತನ ಪಾಡು, ಸಂಕಷ್ಟ ಯಾರೂ ಕೇಳುವವರಿಲ್ಲ. ಇರುವ ಸಣ್ಣಪುಟ್ಟ ಹೊಲ-ಗದ್ದೆಗಳಲ್ಲಿ ಉಳಿಮೆ ಮಾಡಿ, ಖರ್ಚು ವೆಚ್ಚಗಳನ್ನು ನಿಭಾಯಿಸಲು ಇಂದಿನ ದಿನಗಳಲ್ಲಿ ಹರ ಸಾಹಸಪಡಬೇಕಾದ ಸ್ಥಿತಿ. ಇಲ್ಲೋರ್ವ ರೈತ ಉಳಿಮೆ ಎತ್ತು ಇಲ್ಲವೆಂದು ಪತ್ನಿಯನ್ನೇ ನೊಗಕ್ಕೆ ಕಟ್ಟಿ ಹೊಲದಲ್ಲಿ ಉಳಿಮೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದಿಯೋನಿ ತಾಲೂಕಿನ ಬಂಬಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇಶಕ್ಕೆ ಅನ್ನ ನೀಡುವ ರೈತ ಕುಟುಂಬದ ದುಃಸ್ಥಿತಿಯನ್ನು ಕಂಡು ನೆಟ್ಟಿಗರು ಮರುಗಿದ್ದಾರೆ.
ಇತ್ತೀಚೆಗೆ ಸುರಿದ ಭಾರೀ ಮಳೆ ಮತ್ತು ಸಿಡಿಲಿನ ಹೊಡೆತಕ್ಕೆ ಬಂಬಲಿ ಗ್ರಾಮದ ಬಡ ರೈತ ಕಾಶಿನಾಥ್ ಗಾಯಕ್ವಾಡ್ ಅವರಿಗೆ ಸೇರಿದ ಒಂದು ಎತ್ತು ಸಾವನ್ನಪ್ಪಿತ್ತು. ಕೃಷಿ ಕೆಲಸಗಳು ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಅವರ ಜೀವನೋಪಾಯಕ್ಕೆ ಆಧಾರವಾಗಿದ್ದ ಎತ್ತಿನ ಸಾವು ಅವರಿಗೆ ಆಘಾತ ತಂದಿದೆ. ಕೃಷಿ ಕೆಲಸ ನಿಂತುಹೋಗುವ ಸ್ಥಿತಿ.
ಮಾರುಕಟ್ಟೆಯಲ್ಲಿ ಮತ್ತೊಂದು ಎತ್ತನ್ನು ಖರೀದಿಸಲು ಬಡ ರೈತನಿಗೆ ಆರ್ಥಿಕ ಸಾಮರ್ಥ್ಯವಿರಲಿಲ್ಲ. ಈ ಹಿನ್ನೆಲೆಯಲ್ಲಿ ನೇಗಿಲಿನ ಒಂದು ಬದಿಗೆ ಒಂದು ಎತ್ತನ್ನು ಕಟ್ಟಿ, ಇನ್ನೊಂದು ಬದಿಗೆ ಹೆಂಡತಿಯ ಭುಜಕ್ಕೆ ನೊಗ ಇಟ್ಟು ರೈತ ಹೊಲದಲ್ಲಿ ಉಳುಮೆ ಮಾಡಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸಧ್ಯ ರೈತನಿಗೆ ಮಹಾರಾಷ್ಟ್ರ ಸರಕಾರ ಒಂದು ಎತ್ತನ್ನು ಕೊಂಡು ಕೊಟ್ಟಿದ್ದು, ಮಾನವೀಯತೆ ಆಧಾರದ ಮೇಲೆ ಸಹಾಯ ನೀಡಲಾಗಿದೆ.


