
ಬಿಳ್ಳೂರು ವಿರಕ್ತ ಮಠದ ಮುರುಗೇಂದ್ರ ಸ್ವಾಮೀಜಿ ಲಿಂಗೈಕ್ಯ

ಅಥಣಿ : ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಅನೇಕ ಭಕ್ತ ಸಮೂಹವನ್ನು ಹೊಂದಿರುವ ನೆರೆಯ ಮಹಾರಾಷ್ಟ್ರದ ಜತ್ತ ತಾಲೂಕಿನ ಬಿಳ್ಳೂರ ಗ್ರಾಮದ ವಿರಕ್ತ ಮಠದ ಪೂಜ್ಯಶ್ರೀ ಮುರುಘೇಂದ್ರ ಸ್ವಾಮೀಜಿ ಶನಿವಾರ ಸಾಯಂಕಾಲ ಲಿಂಗೈಕ್ಯ ಹೊಂದಿದ್ದಾರೆ.
ಅವರಿಗೆ 72 ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಸ್ವಾಮೀಜಿಗಳು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಪೂಜ್ಯರ ಅಂತ್ಯಕ್ರಿಯೆ ಶ್ರೀಮಠದ ಆವರಣದಲ್ಲಿ ನಡೆಯಲಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಮಠಾಧೀಶರು ಹಾಗೂ ಜನಪ್ರತಿನಿಧಿಗಳು ಆಗಮಿಸಲಿದ್ದಾರೆ.
ಅವರು ಕಾಯಕಯೋಗಿಗಳಾಗಿ, ಎಲ್ಲಡೆ ಅಧ್ಯಾತ್ಮ ಪ್ರವಚನ ಹಾಗೂ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಹೊತ್ತುಕೊಂಡಿದ್ದ ಪೂಜರು ಮಠದ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದರು.
ಬಿಳ್ಳೂರು ಗ್ರಾಮದ ಗುರುಬಸವ ವಿರಕ್ತಮಠದಲ್ಲಿ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ರವಿವಾರ ಮಧ್ಯಾಹ್ನ 3:00 ವರೆಗೆ ಭಕ್ತ ಸಮೂಹಕ್ಕೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಾಯಂಕಾಲ 4:00ಗೆ ಶ್ರೀ ಮಠದ ವಿಧಿ ವಿಧಾನದಂತೆ ಅನೇಕ ಪೂಜ್ಯರ, ಜನಪ್ರತಿನಿಧಿಗಳು ಹಾಗೂ ಗುರು ಹಿರಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ಜರುಗಲಿದೆ.
ನಿಧನಕ್ಕೆ ಸಂತಾಪ : ಶ್ರೀಗಳ ನಿಧನಕ್ಕೆ ಅಥಣಿಯ ಗಚ್ಚಿನ ಮಠದ ಶಿವಬಸವ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ, ಶಾಸಕ ಲಕ್ಷ್ಮಣ ಸವದಿ, ಮಾಜಿ ಶಾಸಕ ಶಹಜಾನ ಡೊಂಗರಗಾವ, ಮಹೇಶ್ ಕುಮಟಳ್ಳಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.