ತಮ್ಮನ ಸಾವಿನ ಸುದ್ದಿ ಕೇಳಿ ಜೀವ ಬಿಟ್ಟ ಅಣ್ಣ ; ಗೋಕಾಕ್ ನಲ್ಲಿ ಕಣ್ಣೀರ ಕಥೆ..!
ಗೋಕಾಕ : ಒಡಹುಟ್ಟಿದ ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನು ಸಹಿತ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಶನಿವಾರ ನಸುಕಿನ ಜಾವ 4 ಘಂಟೆಗೆ ಅನಾರೋಗ್ಯದಿಂದ 10 ನೇ ತರಗತಿಯಲ್ಲಿ ಓದುತ್ತಿದ್ದ ಸತೀಶ್ ಬಾಗನ್ನವರ (16) ಮೃತಪಟ್ಟಿದ್ದನು. ತಮ್ಮನ ಸಾವಿನ ಸುದ್ದಿ ತಿಳಿದ ಅಣ್ಣ ಬಸವರಾಜ ಬಾಗನ್ನವರ (24) ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಇತ್ತ ಮೈದುನ ಮತ್ತು ಗಂಡನ ಸಾವಿನ ಸುದ್ದಿ ಕೇಳಿ ಬಸವರಾಜ ಬಾಗನ್ನವರ ಇತನ ಪತ್ನಿ ತುಂಬು ಗರ್ಭಿಣಿಯಾಗಿದ್ದ ಪವಿತ್ರಾ ಬಸವರಾಜ ಬಾಗನ್ನವರ (20) ಸಹಿತ ಕುಸಿದು ಬಿದ್ದಳು. ತಕ್ಷಣವೇ ಇವಳನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.
ಅದೃಷ್ಟವಶಾತ್ ಪವಿತ್ರಾಳು ಆರೋಗ್ಯದಲ್ಲಿ ಚೇತರಿಕೆ ಕಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.ತನ್ನಿಬ್ಬರು ಗಂಡು ಮಕ್ಕಳು ತಮ್ಮ ಕಣ್ಮುಂದೆಯೇ ಜೀವ ಕಳೆದುಕೊಂಡಿದ್ದು ಇವರ ತಂದೆ-ತಾಯಿಗೆ ಆಘಾತವಾಗಿದೆ.
ಸತೀಶ ಬಾಗನ್ನವರ ಇತ 10 ನೆ ತರಗರತಿಯಲ್ಲಿ ಒದುತಿದ್ದರೆ, ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನು. ಮನೆಗೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡ ಹಿರಿಯ ಜೀವಿಗಳಿಗೆ ಬರ ಸಿಡಿಲು ಬಡೆದಂತಾಗಿದೆ.

