ನವದೆಹಲಿ : ಬದಲಾದ ರಾಜಕೀಯ ಸಮೀಕರಣದಲ್ಲಿ ದೇಶದಲ್ಲೇ ಹೊಸ ಅಲೆ ಸೃಷ್ಟಿಸುತ್ತಿರುವ ಆಮ್ ಆದ್ಮಿ ಪಕ್ಷ ತನ್ನ ಬೇರುಗಳನ್ನು ಎಲ್ಲೆಡೆ ಪಸರಿಸುತ್ತಿದ್ದು ಸಧ್ಯ ಕರ್ನಾಟಕದಲ್ಲೂ ಆರ್ಭಟ ಮುಂದುವರೆದಿದೆ. ಕಳೆದ ಎರಡು ದಿನಗಳ ಹಿಂದೆ 32 ವರ್ಷಗಳ ಐಪಿಎಸ್ ಸೇವೆಗೆ ತೆರೆ ಎಳೆದು ಸಧ್ಯ ಆಮ್ ಆದ್ಮಿ ಪಕ್ಷದ ಮೂಲಕ ರಾಜಕೀಯ ಇನ್ನಿಂಗ್ಸ್ ಪ್ರಾರಂಭಿಸಿದ್ದಾರೆ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್.

ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೋಮವಾರ ರಾಜ್ಯದ ಹಿರಿಯ ಅಧಿಕಾರಿ ಭಾಸ್ಕರ್ ರಾವ್ ಸೇರ್ಪಡೆ ಆಗಿದ್ದಾರೆ.
ಪಕ್ಷದ ಚಿಹ್ನೆ ಹೊಂದಿರುವ ಶಾಲು ಧರಿಸಿ, ಆಪ್ ಎಂಬ ಗಾಂಧಿ ಟೋಪಿ ಧರಿಸಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ದೆಹಲಿಯ ಕಛೇರಿಯಲ್ಲಿ ಭಾಸ್ಕರ್ ರಾವ್ ಜತೆ ದಿಲೀಪ್ ಪಾಂಡೆ, ಪೃಥ್ವಿ ರೆಡ್ಡಿ, ಸಂಚಿತ್ ಸ್ವಾನೆ, ಅರವಿಂದ್, ವಿಜಯ್ ಶಾಸ್ತ್ರಿಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ರಾಜ್ಯದಲ್ಲಿ ಹೊಸ ಅಲೆ : ಈಗಾಗಲೇ ದೇಹಲಿ ಹೊರತುಪಡಿಸಿ ಪಂಜಾಬ್ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು ಸಧ್ಯ ದೇಶ ಬೇರೆ ಬೇರೆ ರಾಜ್ಯಗಳಲ್ಲಿಯೂ ಆಪ್ ಪರವಾದ ಅಲೆ ಜೋರಾಗಿದೆ. ಸಧ್ಯ ಮುಂಬರುವ ಏಪ್ರಿಲ್ ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಆಪ್ ಪಕ್ಷ ಸಂಘಟನೆ ನಡೆಸಿದ್ದು ಹೊಸ ಮುಖಗಳನ್ನು ತನ್ನತ್ತ ಸೆಳೆಯುತ್ತಿದೆ.