
ಧರ್ಮಸ್ಥಳ ಅತ್ಯಾಚಾರ ಪ್ರಕರಣ : ಪ್ರತಿಭಟನೆ ವೇದಿಕೆ ಹತ್ತಲು ಪ್ರಯತ್ನಿಸಿದ ಸೌಜನ್ಯ ತಾಯಿಗೆ ತಡೆ

ಧರ್ಮಸ್ಥಳ : ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹಾಗೂ ಅವರ ಕುಟುಂಬದ ವಿರುದ್ಧ ಅವಹೇಳನ ಖಂಡಿಸಿ ನಡೆದ ಬೃಹತ್ ಪ್ರತಿಭಟನಾ ವೇದಿಕೆ ಹತ್ತಲು ಯತ್ನಿಸಿದ ಸೌಜನ್ಯ ತಾಯಿ ಕುಸುಮಾವತಿಯನ್ನು ತಡೆಯಲಾಗಿದೆ.
ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಅಖಿಲ ಕರ್ನಾಟಕ ಧರ್ಮಸ್ಥಳ ಮಂಜುನಾಥ ಭಕ್ತ ವೃಂದದಿಂದ ಶುಕ್ರವಾರ ಬೃಹತ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಪರ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಮಗಳ ಸಾವಿಗೆ ನ್ಯಾಯ ಕೇಳಲು ಬಂದ ಸೌಜನ್ಯ ತಾಯಿಗೆ ವೇದಿಕೆ ಹತ್ತಿಸಲು ನಿರಾಕರಣೆ ಮಾಡಲಾಯಿತು.
ವೇದಿಕೆ ಹತ್ತಿ ಮಗಳ ಸಾವಿಗೆ ನ್ಯಾಯ ಕೇಳಲು ಯತ್ನಿಸಿದ್ದ ಸಂದರ್ಭದಲ್ಲಿ ಸೌಜನ್ಯ ತಾಯಿ ಹಾಗೂ ಸಹೋದರನಿಗೆ ಪ್ರತಿಭಟನೆಯಲ್ಲಿ ಸೇರಿದ್ದ ಜನ ನಿರಾಕರಣೆ ಮಾಡಿದರು. ಜೊತೆಗೆ ಸಹೋದರನನ್ನು ತಳ್ಳಿದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಸೌಜನ್ಯ ತಾಯಿಯನ್ನು ಹೊರಕಳಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೌಜನ್ಯ ತಾಯಿ ಕುಸುಮಾವತಿ. ಇಲ್ಲಿ ನನ್ನ ಮಗಳ ಹೆಸರು ಹೇಳಿಕೊಂಡು ಪ್ರತಿಭಟನೆ ನಡೆಯುತ್ತಿದ್ದು, ಅವಳಿಗೆ ನ್ಯಾಯ ಕೊಡಿಸಲು ಅಲ್ಲ. ನನ್ನ ಮಗಳ ಸಾವಿಗೆ ನ್ಯಾಯ ಕೇಳಲು ಬಂದಿದ್ದೆ ಆದರೆ ನಮಗೆ ವೇದಿಕೆ ಹತ್ತಲು ಅವಕಾಶ ಕೊಡಲಿಲ್ಲ. ಮಗಳ ಸಾವಿಗೆ ನ್ಯಾಯ ಸಿಗಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.