
ಎಸ್ಪಿ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ – ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು

ಬೆಳಗಾವಿ : ಪೊಲೀಸರು ಸಾರ್ವಜನಿಕರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ ಅವರು ಆರಂಭಿಸಿರುವ ಪೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆರನೇ ಪೋನ್ ಇನ್ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲೆಯ ಜನರು ಪೋನ್ ಮಾಡಿ ತಮ್ಮ ಅಳಲನ್ನು ತೋಡಿಕೊಂಡರು.
ನಾಗನೂರು ಗ್ರಾಮದಲ್ಲಿ ಕಳೆದ 22 ರಂದು ಭಾನುವಾರ ಕೊಲೆಯಾಗಿದೆ. ಪೊಲೀಸರು ಆರೋಪಿಗಳನ್ನು ಹಿಡಿದ್ದಾರೆ. ಅದೇ ಸ್ಥಳದಲ್ಲಿ ಸುಮಾರು ಐದು ಕೊಲೆಗಳು ನಡೆದಿವೆ. ಇದರ ತನಿಖೆ ನಡೆಸುವಂತೆ ಎಸ್ಪಿ ಅವರಿಗೆ ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ನಿಖರವಾಗಿ ಯಾರು ಕೊಲೆಯಾಗಿದ್ದಾರೆ ಎನ್ನುವ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸೂಕ್ತ ಮಾಹಿತಿ ನೀಡುವಂತೆ ತಿಳಿಸಿದರು. ಅಲ್ಲದೆ, ಕೊಲೆಯಾದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಅಥಣಿ ತಾಲೂಕಿನ ನಂದೇಶ್ವರ ಗ್ರಾಮದಲ್ಲಿ ಅಕ್ರಮವಾಗಿ ಸರಾಯಿ ಮಾರಾಟ ಹಾಗೂ ವ್ಯಕ್ತಿಯೊರ್ವ ಹಾಲಿನಲ್ಲಿ ನೀರು ಬೆರೆಸುತ್ತಿದ್ದಾನೆ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಅಕ್ರಮವಾಗಿ ಮಾರಾಟ ಮಾಡುತ್ತಿರುವ ಸರಾಯಿ ಬಂದ್ ಮಾಡಿಸುವುದಾಗಿ ತಿಳಿಸಿದರು.
ರಾಯಬಾಗ ತಾಲೂಕಿನ ಚಿಂಚಲಿ ಜಾತ್ರೆಯಲ್ಲಿ ಕಳ್ಳತನ, ದರೋಡೆ ನಡೆಯುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆ ನೀಡಬೇಕೆಂದು ಮನವಿ ಮಾಡಿಕೊಂಡರು.
ಅಥಣಿ ತಾಲೂಕಿನ ಕೆಎಸ್ಆರ್ ಟಿಸಿ ವಾಹನ ಚಾಲಕರಾಗಿರುವ ನನ್ನ ಪತ್ತಿ ಕಾಣೆಯಾಗಿದ್ದಾರೆ. ಹುಡುಕಿ ಕೊಡುವಂತೆ ಚಾಲಕನ ಪತ್ನಿ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಸಂಜೀವ ಪಾಟೀಲ ಅವರು, ಸಂಜೆಯವರೆಗೆ ಸಮಯ ಕೊಡಿ ಪತ್ತೆ ಮಾಡಿ ತಿಳಿಸಲಾಗುವುದು ಎಂದರು.
ಬೈಲಹೊಂಗಲ ತಾಲೂಕಿನ ಮಹಿಳೆಯೊರ್ವಳು ಕರೆ ಮಾಡಿ ವ್ಯಕ್ತಿಯೊರ್ವ ಕಾಣೆಯಾಗಿದ್ದಾನೆ. ಈ ಕುರಿತು ಬೈಲಹೊಂಗಲ ಹಾಗೂ ದೊಡವಾಡ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಇಲ್ಲಿಯವರಗೆ ದೂರು ದಾಖಲಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಬಂಧಿಸಿದ ಪೊಲೀಸ್ ಠಾಣೆಗೆ ಹೊಗಿ ದೂರು ನೀಡಿ ಎಫ್ಐಆರ್ ದಾಖಲಿಸಿಕೊಳ್ಳಲು ಸೂಚಿಸುತ್ತೇನೆ ಎಂದರು.
ಕಾಕತಿಯಲ್ಲಿ ಕಂಟ್ರಿ ಸರಾಯಿ ಹಾಗೂ ಮಟ್ಕಾ ಹೆಚ್ಚಾಗಿ ನಡೆಯುತ್ತಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಅವರಿಗೆ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಅವರು ಈ ಮಾಹಿತಿಯನ್ನು ನಗರ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು ಎಂದರು.
ಅಕ್ರಮ ಸರಾಯಿ ಮರಾಟ, ಹಣ ಕೊಟ್ಟವರಿಂದ ಮೋಸ, ಅಕ್ರಮ ಮರಳು ಸಾಗಾಟ ಸೇರಿದಂತೆ ಇನ್ನಿತರ ಸಮಸ್ಯೆ ಹೇಳಿಕೊಂಡು ಎಸ್ಪಿ ಅವರಿಗೆ ದೂರು ನೀಡಿದರು.
ಎಸ್ಪಿ ಫೋನ್ ಇನ್ ಮೊದಲ ಕಾರ್ಯಕ್ರಮದಲ್ಲಿ 72 ಕರೆಗಳು, ಎರಡನೇ ಫೋನ್ ಇನ್ ನಲ್ಲಿ 65, ಮೂರನೇ ಫೋನ್ ಇನ್ ನಲ್ಲಿ 58, ನಾಲ್ಕನೇ ಫೋನ್ ಇನ್ ನಲ್ಲಿ 62, ಐದನೇ ಫೋನ್ ಇನ್ ನಲ್ಲಿ 56 ಹಾಗೂ ಆರನೇ ಫೋನ್ ಇನ್ ನಲ್ಲಿ ಇಲ್ಲಿಯವರೆಗೆ ಸುಮಾರು 17 ಒಟ್ಟು 330 ಕರೆಗಳನ್ನು ಸ್ವೀಕರಿಸಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಇನಸ್ಪೆಕ್ಟರ್ಗಳಾದ ಬಿ.ಆರ್.ಗಡ್ಡೇಕರ್, ಮಹಾದೇವ ಎಸ್.ಎಂ., ಬಾಳಪ್ಪ ತಳವಾರ, ವಿಠ್ಠಲ ಮಾದರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.