
ಸತೀಶ್ ಜಾರಕಿಹೊಳಿ ಹುಟ್ಟುಹಬ್ಬದ ನಿಮಿತ್ತ ಮಕ್ಕಳಿಗೆ ಕ್ರೀಡಾ ಸಾಮಗ್ರಿ ವಿತರಣೆ

ಬೆಳಗಾವಿ : ಯಮಕನಮರಡಿ ಶಾಸಕ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡರಾದ ಶಾಸಕ ಸತೀಶ್ ಜಾರಕಿಹೊಳಿ ಹುಟ್ಟುಹಬ್ಬದ ನಿಮಿತ್ತವಾಗಿ ಮಾನವತಾ ಫೌಂಡೇಶನ್ ವತಿಯಿಂದ ನಗರದ ಸಮರ್ಥನಂ ಅಂಗವಿಕಲ ಸಂಸ್ಥೆ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ ಮಾಡಲಾಯಿತು.
ಗುರುವಾರ ನಗರದ ತಿಲಕವಾಡಿಯಲ್ಲಿರುವ ಸಮರ್ಥನಂ ಅಂಗವಿಕಲ ಸಂಸ್ಥೆಯ ಮಕ್ಕಳಿಗೆ ಶಾಸಕ ಸತೀಶ್ ಜಾರಕಿಹೊಳಿ ಹುಟ್ಟು ಹಬ್ಬದ ನಿಮಿತ್ತವಾಗಿ ಊಟದ ವ್ಯವಸ್ಥೆ ಮಾಡಲಾಯಿತು. ಜೊತೆಗೆ ಮಕ್ಕಳಿಗೆ ಆಟವಾಡುವ ಸಾಮಗ್ರಿ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾನವತಾ ಫೌಂಡೇಶನ್ ಅಧ್ಯಕ್ಷ ಸನ್ನಿ ತೆಲಸಂಗ, ನಿಸ್ವಾರ್ಥವಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡಿರುವ ಶಾಸಕ ಸತೀಶ್ ಜಾರಕಿಹೊಳಿ ಅವರ ಹುಟ್ಟುಹಬ್ಬದ ಆಚರಣೆ ಈ ಬಾರಿ ಅತ್ಯಂತ ವಿಭಿನ್ನವಾಗಿ ನೆರವೇರಿಸಿದ್ದೇವೆ. ಸಮರ್ಥನಂ ಶಾಲಾ ಮಕ್ಕಳಿಗೆ ನಮ್ಮ ಕೈಲಾದಷ್ಟು ಸೇವೆ ಮಾಡಿದ್ದೇವೆ ಎಂದರು.

ಮಾನವತಾ ಫೌಂಡೇಶನ್ ಕಾರ್ಯದರ್ಶಿ ಅಮೀತ್ ರಜಪೂತ ಮಾತನಾಡಿ. ಪ್ರತಿ ವರ್ಷವೂ ನಮ್ಮ ನಾಯಕರಾದ ಸತೀಶ್ ಜಾರಕಿಹೊಳಿ ಅವರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ಅವರ ಸಮಾಜಸೇವೆ ನಮಗೆಲ್ಲ ಆದರ್ಶ. ಈ ಹಿನ್ನಲೆಯಲ್ಲಿ ಇಂದು ಸಮರ್ಥನಂ ಸಂಸ್ಥೆಗೆ ಭೇಟಿ ನೀಡಿ ನಮ್ಮ ಸಂಸ್ಥೆಯ ವತಿಯಿಂದ ಅಳಿಲುಸೇವೆ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ವಿಜಯ್ ತಳವಾರ್, ಜ್ಯೋತಿಬಾ ಗುಟ್ಟೆಣ್ಣವರ್ ಉಪಸ್ಥಿತರಿದ್ದರು.