ಅಥಣಿ : ಸಾಮಾನ್ಯವಾಗಿ ಅಥಣಿ ಸಾಹುಕಾರ್ ಲಕ್ಷ್ಮಣ ಸವದಿ ಹಾಗೂ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುವುದು ಹೊಸದೇನಲ್ಲ. ಆದರೆ ಈಗ ಇನ್ನೊಂದು ವಿಚಾರಕ್ಕೆ ಅಥಣಿ ಸಾಹುಕಾರರ ಕಾಲು ಎಳೆದಿದ್ದಾರೆ ಗೋಕಾಕ್ ಸಾಹುಕಾರ್.

ಮೊನ್ನೆಯಷ್ಟೇ ಮಾಜಿ ಡಿಸಿಎಂ ಹೊಸ ಕಾರು ಖರೀದಿ ಮಾಡಿದ್ದಾರೆ. ಈ ವೀಡಿಯೋವನ್ನು ಲಕ್ಷ್ಮಣ ಸವದಿ ಅಭಿಮಾನಿಗಳು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಾಕಿಕೊಂಡು ಸಂಭ್ರಮಿಸಿದ್ದರು. ಸಧ್ಯ ಈ ಹೊಸ ಕಾರಿನ ವಿಷಯವಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಲೆಳೆಯುವ ಮಾತು ಆಡಿದ್ದರು.‌

ಸೋಮವಾರ ಅಥಣಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಳಕ್ಕೆ ತಾವು ಭೇಟಿ ನೀಡುತ್ತೀರಾ ಎಂದು ಪತ್ರಕರ್ತರು ರಮೇಶ್ ಜಾರಕಿಹೊಳಿ ಅವರನ್ನು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಹೊಸ, ಹೊಸ ಗಾಡಿ ಬರುತ್ತಿವೆ ನೋಡಿದ್ರಿಲ್ಲೋ…ಎಂದು ಹೇಳುವ ಮೂಲಕ ಎಲ್ಲಿಂದ ಎಲ್ಲಿಗೋ ಟಚ್ ಕೊಟ್ಟು ನಕ್ಕು ಹೊರನಡೆದರು.

ಬಿಜೆಪಿ ಶಾಸಕ ಮುನಿರತ್ನ ಬಂಧನದ ಹಿಂದೆ ಸಿಡಿ ಶಿವು ಇದ್ದಾನೆ. ರಾಜಕೀಯ ವಿರೋಧಿಗಳನ್ನು ಈ ರೀತಿ ಷಡ್ಯಂತ್ರದಿಂದ ಮುಗಿಸುವುದೇ ಅವನ ಕಾರ್ಯವಾಗಿದೆ ಎಂದು ಉಪಮುಖ್ಯಮಂತ್ರಿ‌ ಡಿ.ಕೆ ಶಿವಕುಮಾರ್ ವಿರುದ್ಧ
ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಸೋಮವಾರ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆ ನಂತರ ಪ್ರತಿಕ್ರಿಯೆ ನೀಡಿದ ಇವರು. ಶಾಸಕ ಮುನಿರತ್ನ ದಲಿತರಿಗೆ ಹಾಗೂ ಒಕ್ಕಲಿಗರ ಕುರಿತು ಆಡಿರುವ ಮಾತಿನ ಆಡಿಯೋ ಸತ್ಯಾಸತ್ಯತೆ ಹೊರಬರಬೇಕು.

ಆದರೆ ಸಿಡಿ ಶಿವು ಅವನ ವಿರೋಧಿಗಳನ್ನು ಜೈಲಿಗೆ ಹಾಕುವ ಕೆಲಸ ಮಾಡುತ್ತಿದ್ದಾನೆ. ಇವರ ಕುತಂತ್ರಕ್ಕೆ ಮೊದಲು ಬಲಿಯಾಗಿದ್ದು ನಾನು, ನಂತರ ದೇವೆಗೌಡರ ಕುಟುಂಬ, ಈಗ ಮುನಿರತ್ನ ಆಗಿದ್ದಾರೆ ಎಂದರು.

ಸಿಡಿ ಶಿವುನಿಂದ ಕಾಂಗ್ರೆಸ್ ನಾಯಕರೇ ನೋವು ಅನುಭವಿಸುತ್ತಿದ್ದಾರೆ. ಇನ್ನುಮುಂದೆ ಅನೇಕ ಸಿಡಿಗಳು ದೊಡ್ಡ ಪ್ರಮಾಣದಲ್ಲಿ ಹೊರಬರುತ್ತವೆ. ಸಧ್ಯ ಸಿಡಿ ಕುರಿತಾದ ತನಿಖೆಯನ್ನು ಸಿಬಿಐ ಗೆ ನೀಡಬೇಕಾಗಿದೆ.

ದ್ವೇಷದ ರಾಜಕಾರಣದಿಂದ ಜಾತಿ, ಜಾತಿಗಳ ನಡುವೆ ಬೆಂಕಿ ಹಚ್ಚುವ ಕಾರ್ಯ ನಡೆಯುತ್ತದೆ. ರಾಜ್ಯದಲ್ಲಿ ನಡೆಯುತ್ತಿರುವ ನಕಲಿ ಸಿಡಿ ತಡೆಗೆ ಪ್ರದಾನಿ ನರೇಂದ್ರ ಮೋದಿಯವರೇ ಸಿಬಿಐ ತನಿಖೆಗೆ ವಹಿಸಬೇಕೆಂದು ಮನವಿ ಮಾಡಿಕೊಂಡರು.