ರಾಜು ಕಾಗೆ ಏಟಿಗೆ ನಲುಗಿದ ಕಾಂಗ್ರೆಸ್…!
ಬೆಳಗಾವಿ : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವದ ನಂತರ ಕಾಗವಾಡ ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಕೋಪಗೊಂಡು ಕಾಂಗ್ರೆಸ್ ಸೇರಿದ್ದ ರಾಜು ಕಾಗೆ ಈಗ ಕಾಂಗ್ರೆಸ್ ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದಾರೆ.
ಶಾಸಕ ರಾಜು ಕಾಗೆ ಸೇರಿ ಕೆಲ ಹಿರಿಯ ಶಾಸಕರು ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದೇ ತಡ ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಆಗಮಿಸಿ ಮಾತುಕತೆಗೆ ಮುಂದಾಗಿದೆ. ಅಷ್ಟೇ ಅಲ್ಲದೆ ಅಸಮಾಧಾನ ಹೊಂದಿರುವ ಕಾಗೆ, ಬಿ.ಆರ್ ಪಾಟೀಲ ಅವರಿಗೆ ಸುರ್ಜೇವಾಲಾ ಭೇಟಿಗೆ ಮೊದಲ ಆಧ್ಯತೆ ನೀಡಲಾಗಿದೆ.
ಹೌದು ಗ್ಯಾರಂಟಿ ಯೋಜನೆಯಿಂದ ಕಂಗಾಲಾಗಿರುವ ರಾಜ್ಯ ಸರಕಾರ ಶಾಸಕರಿಗೆ ಅನುದಾನ ನೀಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಶಾಸಕ ರಾಜು ಕಾಗೆ ಅನುದಾನ ವಿಚಾರವಾಗಿ ಸರಕಾರದ ವಿರುದ್ಧ ನೇರ ಆರೋಪ ಮಾಡಿದ್ದಾರೆ.
ಅನುದಾನ ನೀಡಲು ವಿಳಂಬವಾಗುತ್ತಿರುವುದರಿಂದ ಕ್ಷೇತ್ರದ ಜನ ಹಿಡಿಶಾಪ ಹಾಕುತ್ತಿದ್ದಾರೆ. ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದೇನೆ ಎಂದು ಹೇಳಿಕೆ ನೀಡಿದ್ದರು. ಕಾಗೆ ಹೇಳಿಕೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿತ್ತು.
ಆಳಂದ ಶಾಸಕ ಬಿ.ಆರ್ ಪಾಟೀಲ ವಸತಿ ಇಲಾಖೆ ಭ್ರಷ್ಟಾಚಾರ ಕುರಿತು ಆರೋಪಿಸಿದ್ದರೆ, ಶಾಸಕ ಕಾಗೆ ತಮ್ಮದೇ ರೀತಿಯಲ್ಲಿ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಬೆಚ್ಚಿ ಬಿದ್ದ ಕಾಂಗ್ರೆಸ್ ಹೈಕಮಾಂಡ್ ಮಾತುಕತೆಗೆ ಮುಂದಾಗಿದೆ. ಸೋಮವಾರ ಶಾಸಕ ಬಿ.ಆರ್ ಪಟೀಲ್ ಸುರ್ಜೇವಾಲಾ ಭೇಟಿ ಮಾಡಿದ್ದರೆ, ಇಂದು ಮಂಗಳವಾರ ಶಾಸಕ ರಾಜು ಕಾಗೆ ಮಾತನಾಡಲಿದ್ದಾರೆ.


