
ಉ.ಪ್ರ. ಪ್ರಯಾಗರಾಜ ಸಂಗಮದಲ್ಲಿ ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ಲೋಕಾರ್ಪಣೆ

ಬೆಳಗಾವಿ : ಸರಸ್ವತಿಯ ಸ್ವಕ್ಷೇತ್ರವೆಂದೇ ಪ್ರಖ್ಯಾತಿ ಪಡೆದಿರುವ ವಾರಾಣಾಸಿಯಲ್ಲಿರುವ ಶ್ರೀಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲಕ್ಕೆ ಶತಮಾನೋತ್ಸವ ಆಚರಿಸಿದ ಹಿರಿಮೆ ಇದೆ ಎಂದು ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀಜಗದ್ಗುರು ಅಭಿನವ ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಉತ್ತರ ಪ್ರದೇಶದ ಪ್ರಯಾಗರಾಜ ತ್ರಿವೇಣಿಸಂಗಮ ಕ್ಷೇತ್ರದಲ್ಲಿ ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ನವೀಕೃತ ಕಟ್ಟಡವನ್ನು ಶ್ರೀ ಶೈಲ ಪೀಠದ ಜಗದ್ಗುರುಗಳೊಂದಿಗೆ ಜಂಟಿಯಾಗಿ ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿ ಮಾತನಾಡಿದರು.
1801 ರಿಂದ 1810ರವರಗೆ ಇದೇ ಗುರುಕುಲದ ವಿದ್ಯಾರ್ಥಿಯಾಗಿದ್ದ ಧಾರವಾಡ ತಾಲೂಕು ಗರಗದ ಶ್ರೀಮಡಿವಾಳ ಶಿವಯೋಗಿಗಳು ತಮ್ಮ ವಿಶಿಷ್ಟ ಶಿವಯೋಗ ಸಾಧನೆಯಿಂದಾಗಿ ಲೋಕವಿಖ್ಯಾತರಾದವರು. ಶ್ರೀಜಗದ್ಗುರು ಪಂಚಪೀಠಗಳ ಗುರುಪರಂಪರೆ, ವಿರಕ್ತ ಪರಂಪರೆಯ ಮಠಾಧೀಶರು, ಶ್ರೀಸಿದ್ಧಾರೂಢ ಪರಂಪರೆಯ ಮತ್ತು ಶ್ರೀಶಿವಾನಂದ ಪರಂಪರೆಯ ಅನೇಕ ಮಠಾಧೀಶರು ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ವಿದ್ಯಾರ್ಥಿಗಳಾಗಿದ್ದವರು ಎನ್ನುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದರು.
ವಿದ್ಯಾವಾಚಸ್ಪತಿಗಳು* : ಸತತ ಅಧ್ಯಯನ ಶೀಲತೆ, ಪೂಜೆ, ತಪೋಷ್ಠಾನ ಮತ್ತು ಶಿವಯೋಗ ಸಾಧನೆಯ ಮೂಲಕ ಅಪಾರ ಪಾಂಡಿತ್ಯವನ್ನು ಹೊಂದಿರುವ ಪ್ರಸ್ತುತ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ವಿದ್ಯಾವಾಚಸ್ಪತಿಗಳು. ಕನ್ನಡ, ಸಂಸ್ಕೃತ, ಹಿಂದಿ, ಮರಾಠಿ ಸೇರಿದಂತೆ ಹಲವು ಭಾಷೆಗಳಲ್ಲಿ ವಿದ್ವತ್ತನ್ನು ಸಂಪಾದಿಸಿರುವ ಹಿರಿಯ ಜಗದ್ಗುರುಗಳು ವಿಶೇಷವಾಗಿ ವೀರಶೈವ ವಾಙ್ಮಯ ಲೋಕದಲ್ಲಿ ತಮ್ಮದೇ ಆದ ಪಾಂಡಿತ್ಯದ ನೆಲೆಯಲ್ಲಿ ಮೇರು ವಿದ್ವಾಂಸರಾಗಿ ಗುರುತಿಸಿಕೊಂಡಿದ್ದಾರೆ.
ಈ ನಿಟ್ಟಿನಲ್ಲಿ ವಾರಾಣಾಸಿಯ ವಿವಿಧ ವಿಶ್ವವಿದ್ಯಾಲಯಗಳು ಅವರನ್ನು ಗೌರವಿಸಿವೆ. ವೀರಶೈವ ಧರ್ಮ ಗ್ರಂಥವಾದ ಶ್ರೀಸಿದ್ಧಾಂತ ಶಿಖಾಮಣಿ ಉದ್ಗ್ರಂಥವು ದೇಶದ ಬಹುಪಾಲು ಭಾಷೆಗಳಲ್ಲಿ ಮುದ್ರಣವಾಗಿರುವುದು ಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ ಸತತ ಪರಿಶ್ರಮವೇ ಕಾರಣವಾಗಿದೆ ಎಂದೂ ಉಜ್ಜಯಿನಿ ಜಗದ್ಗುರುಗಳು ನುಡಿದರು.
ಶ್ರೀಶೈಲ ಪೀಠದ ಶ್ರೀಜಗದ್ಗುರು ಡಾ.ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಮಾತನಾಡಿ,
ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಕಾಶಿ ಜ್ಞಾನ ಪೀಠಕ್ಕೆ ತನ್ನದೇ ಆದ ಪ್ರಾಚೀನ ಘನ ಗುರುಪರಂಪರೆ ಇದ್ದು, ಭಾರತದ ಬಹುಪಾಲು ರಾಜ್ಯಗಳಲ್ಲಿ ತನ್ನ ಶಾಖಾಮಠಗಳನ್ನು ಹೊಂದಿದೆ.
ಶ್ರೀಕಾಶಿ ಪೀಠವು ತನ್ನ ಹೆಸರಿಗೆ ತಕ್ಕಂತೆ ಸಾವಿರಾರು ವರ್ಷಗಳಿಂದಲೂ ಜ್ಞಾನ ದಾಸೋಹಕ್ಕೆ ತೆರೆದುಕೊಂಡಿದೆ. ಭಾರತದ ವಿವಿಧ ರಾಜ್ಯಗಳ ಅನೇಕ ಮಠಾಧೀಶರುಗಳ ಅಧ್ಯಯನಕ್ಕೆ ಆಶ್ರಯ ನೀಡಿದ ಹಿರಿಮೆ ಶ್ರೀಕಾಶಿ ಪೀಠಕ್ಕೆ ಇದೆ ಎಂದೂ ಅವರು ಹೇಳಿದರು.
ಸಾನ್ನಿಧ್ಯವಹಿಸಿದ್ದ ಕಾಶಿ ಜ್ಞಾನ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಆಶೀರ್ವಚನ ನೀಡಿ, ಪ್ರಯಾಗರಾಜ ಮಹಾಕುಂಭಮೇಳದಲ್ಲಿ ಪಾಲ್ಗೊಂಡು ತ್ರಿವೇಣಿ ಸಂಗಮದಲ್ಲಿ ಮಂಗಲಸ್ನಾನಗೈದು ಶ್ರೀಕಾಶಿ ಪೀಠದ ಶಾಖಾ ಜಂಗಮವಾಡಿಮಠದ ನವೀಕೃತ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಆಗಮಿಸಿದ್ದ ಸಮಸ್ತ ಭಕ್ತಗಣಕ್ಕೆ ಆಶೀರ್ವದಿಸಿರುವ ಶ್ರೀಉಜ್ಜಯಿನಿ ಮತ್ತು ಶ್ರೀಶ್ರೀಶೈಲ ಪೀಠಗಳ ಉಭಯ ಜಗದ್ಗುರುಗಳ ನೆನಹು ಕಾಶಿ ಪೀಠದ ಗುರುಪರಂಪರೆಯಲ್ಲಿ ಪ್ರಸ್ತುತ ವಿಶೇಷವಾಗಿ ದಾಖಲಾಗಿದೆ. ಇದು ತಮಗೆ ವೈಯಕ್ತಿಕವಾಗಿ ವ್ಯಾಪಕ ಖುಷಿ ತಂದಿದೆ ಎಂದರು.
ಬಾರ್ಶಿ ದೈವಾಡಕರಮಠದ ಶ್ರೀಗುರುಸಿದ್ಧ ಮಣಿಕಂಠ ಶಿವಾಚಾರ್ಯ ಸ್ವಾಮೀಜಿ, ಕಡಬಗಾಂವ ಓಂಕಾಸಿದ್ಧ ಶಿವಾಚಾರ್ಯ ಸ್ವಾಮೀಜಿ, ಮೊರಬದ ಜಡೆಮಠದ ಪಟ್ಟಾಧ್ಯಕ್ಷರು, ಕಾಶಿ ವೀರಶೈವ ವಿದ್ವತ್ ಸಂಘದ ವಿದ್ಯಾರ್ಥಿಗಳು, ಪ್ರಯಾಗರಾಜ ಕ್ಷೇತ್ರದ ಪ್ರಯಾಗರಾಜೇಶ್ವರ ಮಹಿಳಾ ಭಜನಾ ಮಂಡಳದ ತಾಯಂದಿರು ಹಾಗೂ ವಿವಿಧ ರಾಜ್ಯಗಳಗಳ ಭಕ್ತಾದಿಗಳು ಇದ್ದರು.