ಅಥಣಿ : ದ್ವಿಚಕ್ರ ವಾಹನ ಅಪಘಾತದಲ್ಲಿ ಮರಣ ಹೊಂದಿದ್ದ ತಾಲೂಕಿನ ಖವಟಕೊಪ್ಪ ಗ್ರಾಮದ ವೀರ ಯೋಧ ಮಾಳಪ್ಪ ಭೀಮಪ್ಪ ಬಾಳಿಗೇರಿ (21) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದಿಂದ ನೆರವೇರಿತು.

ಸಿಯಾಚಿನ್ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದ ತಾಲೂಕಿನ ಯೋಧ ಕಳೆದ ಕೆಲವು ದಿನಗಳಿಂದ ರಜೆಯ ಮೇಲೆ ಖವಟಕೊಪ್ಪ ಗ್ರಾಮಕ್ಕೆ ಬಂದಿದ್ದರು. ಅರಕೇರಿ ಅಮೋಘಸಿದ್ಧ ದೇವರ ದರ್ಶನ ಪಡೆದು ಸ್ವಗ್ರಾಮಕ್ಕೆ ಮರಳುತ್ತಿದ್ದ ವೇಳೆ, ಅಥಣಿ ಪಟ್ಟಣದ ಹೊರವಲಯದ ಕರಿ ಮಸೂತಿ ಬಳಿ ಬೈಕ್‌ನಿಂದ ಆಯ ತಪ್ಪಿ ಬಿದ್ದು ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಅಸು ನೀಗಿದ್ದರು.

ಯುವಕನ ಸಾವಿಗೆ ಖವಟಕೊಪ್ಪ ಗ್ರಾಮಸ್ಥರು ಕಣ್ಣೀರು ಹಾಕಿದರು. ಯೋಧನ ಪಾರ್ಥಿವ ಶರೀರಕ್ಕೆ ಬಿಜೆಪಿ ಯುವ ಮುಖಂಡ ಚಿದಾನಂದ ಸವದಿ‌ ಸೇರಿದಂತೆ ಅನೇಕರು ಅಂತಿಮ ನಮನ ಸಲ್ಲಿಸಿದರು. ಸೋಮವಾರ ಸ್ವ ಗ್ರಾಮದ  ಯೋಧನ ತೋಟದಲ್ಲಿ ಸಕಲ ಸರ್ಕಾರಿ ಗೌರವದ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು.