ಉಚ್ಚಾಟನೆಗೆ ನಿಖರ ಕಾರಣ ಹೇಳಿ ; ಕರವೇ ಮುಖಂಡರ ವಿರುದ್ಧ ಸಿಡಿದೆದ್ದ ಯುವಕರು
ಬೈಲಹೊಂಗಲ : ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆಯಿಂದ ನಮ್ಮನ್ನು ಉಚ್ಛಾಟನೆ ಮಾಡಿರುವ ಕುರಿತು ಸ್ಪಷ್ಟನೆ ನೀಡಬೇಕೆಂದು ಕರವೇ ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಬೆಳಗಾವಿಯಲ್ಲಿ ರಾಜ್ಯೋತ್ಸವ ದಿನದಂದು ಸರಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಕುರಿತು ಜಿಲ್ಲಾ ಕರವೇ ಘಟಕದಿಂದ ಅ.5 ರಂದು ಜಿಲ್ಲಾಧಿಕಾರಿಗೆ ರಾಜ್ಯ ಸಂಚಾಲಕ ಮಹಾದೇವ ತಳವಾರ ನೇತೃತ್ವದಲ್ಲಿ ಮನವಿ ಸಲ್ಲಿಸಲು ತೀರ್ಮಾಣಿಸಲಾಗಿತ್ತು. ಈ ಕುರಿತು ಜಿಲ್ಲೆಯ ಎಲ್ಲ ಪದಾಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಬರದೇ ಇದ್ದ ಕಾರಣ ಮಹಾದೇವ ತಳವಾರ ನಿರ್ದೇಶನದ ಮೇರೆಗೆ ಸುಮಾರು 200 ಜನ ಕರವೇ ಕಾರ್ಯಕರ್ತರೊಂದಿಗೆ ಮನವಿ ಸಲ್ಲಿಸಲಾಗಿದೆ. ಮಹಾದೇವ ತಳವಾರ ಅವರನ್ನು ಉಚ್ಛಾಟಿಸಿದೆ, ಕೇವಲ ನಾಲ್ಕ ಜನರನ್ನು ಮಾತ್ರ ಉಚ್ಛಾಟಿಸಿದರ ಹಿಂದೆ ದುರುದ್ದೇಶ ಇದೆ ಎಂದರು.
ಜಿಲ್ಲಾಧ್ಯಕ್ಷರು ಸರ್ವಾಧೀಕರ ಧೋರಣೆ ಕೈ ಬಿಟ್ಟು ಸಂಘಟನೆಗೆ ಮುಂದಾಗಬೇಕು. ಇಲ್ಲದಿದ್ದರೆ ಕರವೇ ನಶೀಸಿ ಹೋಗುತ್ತದೆ ಎಂದರು. ಈ ಕೂಡಲೇ ನಮ್ಮ ಉಚ್ಛಾಟನೆಯನ್ನು ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಕೂಲಂಕೂಷವಾಗಿ ಪರಿಶೀಲಿಸಿ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಕಳೆದ 19 ವರ್ಷದಿಂದ ಕರವೇ ಸಂಘಟನೆಯಲ್ಲಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದು, ನಾವು ಯಾವುದೇ ಸಂಘಟನೆ ವಿರೋಧಿ ಚಟುವಟಿಕೆ ಮಾಡಿರುವುದಿಲ್ಲ ಎಂದು ಸ್ಪಷ್ಟ ಪಡಿಸಿ ನಮ್ಮ ತಪ್ಪನ್ನು ತೋರಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಕಳೆದ 4 ವರ್ಷಗಳಿಂದ ಸಂಘಟನೆಯಲ್ಲಿ ಯಾವುದೇ ಚಟುವಟಿಕೆ ಕೈಗೊಳ್ಳದೆ, ಸಂಘವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗೆ ಬಳಕೆ ಮಾಡಿಕೊಂಡು ಮೂಲ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಕೇವಲ ತಮ್ಮ ಚೀಲಾಗಳನ್ನು ನೇಮಕ ಮಾಡಿಕೊಳ್ಳುತ್ತಿರುವುದಕ್ಕೆ ಅಕ್ರೋಶ ಹೊರ ಹಾಕಿದರು.
ಕರವೇ ಸಂಘಟನೆಯನ್ನು ತೊರೆದು ಯಾವುದೇ ಸಂಘಟನೆಯನ್ನು ಸೇರುವುದಿಲ್ಲ. ಈ ಸಂಘಟನೆಯಲ್ಲಿಯೇ ಮುಂದುವರೆದು ನಾವು ಈ ಹಿಂದಿನಂತೆ ಸಂಘಟನೆಯ ಪರ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದರು.
ಸಣ್ಣಗೌಡ ಸಂಗನ್ನಗೌಡರ ಮಾತನಾಡಿ, ಜಿಲ್ಲಾ ಸಂಚಾಲಕ ಶಿವಾನಂದ ಕೋಲಕಾರ, ಬೈಲಹೊಂಗಲ ತಾಲೂಕಾ ತಾಲೂಕಾಧ್ಯಕ್ಷ ರಾಜು ಬೋಳನ್ನವರ, ಸವದತ್ತಿ ತಾಲೂಕಾಧ್ಯಕ್ಷ ಉದಯ ಚಿಕ್ಕನ್ನವರ, ಚಿಕ್ಕೋಡಿ ತಾಲೂಕಾಧ್ಯಕ್ಷ ನಾಗೇಶ ಮಾಳಿ ಈ ನಾಲ್ಕು ಜನ ಪದಾಧಿಕಾರಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಚ್ಛಾಟನೆ ಮಾಡಿರುವ ಉದ್ದೇಶ ಏನು ಎಂದು ಪ್ರಶ್ನಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ತಾಲೂಕಾಧ್ಯಕ್ಷ ರಾಜು ಬೋಳಣ್ಣವರ, ಮಲ್ಲಿಕಾರ್ಜುನ ಬಾಜಿ, ಶಿವಾನಂದ ಕುರಬೇಟ, ಸಿದ್ಧಾರೂಢ ಹೊಂಡಪ್ಪನ್ನವರ, ಅಭಿಷೇಕ ಕಲಾಲ, ಅನೀಲ ತೋಟಗಿ, ಪಿಂಟು ಕುದರಿ, ಅಭಿಷೇಕ ಹಡಪದ, ಶಶಿಕುಮಾರ ಪಾಟೀಲ ಇದ್ದರು


