ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳಿದ ಬಿಜೆಪಿ ಶಾಸಕ ; ಸಿದ್ದು ನೀತಿ ಪಾಠ
ಬೆಂಗಳೂರು : ರಾಜಕಾರಣಿಗಳು ಕೆಲ ಸಂದರ್ಭದಲ್ಲಿ ನಾಲಿಗೆ ಮೇಲೆ ಹಿಡಿತ ಕಳೆದುಕೊಂಡು ಬಾಯಿಗೆ ಬಂದಿದ್ದೆಲ್ಲ ಮಾತನಾಡುತ್ತಾರೆ. ನಂತರ ಆಗುವ ಪರಿಣಾಮಕ್ಕೆ ವಿಷಾದ ವ್ಯಕ್ತಪಡಿಸುವುದು ಸಾಮಾನ್ಯ. ಇಂತಹುದೆ ಒಂದು ಘಟನೆ ಸದ್ಯ ನಡೆದಿದೆ.
ಸಿಎಂ ಕ್ಷಮೆ ಕೇಳಿದ್ದು ಬೇರೆ ಯಾರೂ ಅಲ್ಲ ಬಿಜೆಪಿ ಹಿರಿಯ ಶಾಸಕ ಅರವಿಂದ್ ಬೆಲ್ಲದ್ ಅವರು. ಕಳೆದ ಕೆಲ ದಿನಗಳ ಹಿಂದೆ ಅರವಿಂದ ಬೆಲ್ಲದ್ ಜಿಂದಾಲ್ ಪ್ರಕರಣಕ್ಕೆ ಸಂಬಂದಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದರು.
ಧಾರವಾಡದಲ್ಲಿ ಮಾತನಾಡಿದ್ದ ಅವರು, ‘ಸಿದ್ದರಾಮಯ್ಯ ಅವರದ್ದು ಏನು ಅಪ್ಪನ ಮನೆಯ ಆಸ್ತಿನಾ’ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಅರವಿಂದ್ ಬೆಲ್ಲದ್ ಅವರು ಪತ್ರ ಬರೆದು ಕ್ಷಮೆ ಕೇಳಿದ್ದಾರೆ.
ಅರವಿಂದ ಬೆಲ್ಲದ್ ಕ್ಷಮೆ ಕೋರಿ ಪತ್ರ ಬರೆದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾರಬಗ್ಗೆಯೂ ವೈಯಕ್ತಿಕ ನಿಂದನೆ ಮಾಡುವುದಿಲ್ಲ. ಅನೇಕರು ನನ್ನ ವಿರುದ್ಧ ಟೀಕೆ ಮಾಡಿದ್ದು ಇದೆ. ಅರವಿಂದ್ ಬೆಲ್ಲದ್ ಕುರಿತು ನನ್ನ ಮನಸ್ಸಿನಲ್ಲಿ ಯಾವುದೇ ದ್ವೇಷ ಇಲ್ಲ. ಅವರ ತಂದೆ ಜೊತೆ ಉತ್ತಮ ಒಡನಾಟ ಹೊಂದಿರುವ ನನಗೆ ಅವರಂತೆ ಅರವಿಂದ ಬೆಲ್ಲದ್ ಅವರು ಸಜ್ಜನ ರಾಜಕೀಯ ಪರಂಪರೆ ಮುಂದುವರೆಸಿಕೊಂಡು ಹೋಗಲಿ ಎಂದರು.


