ಹಿಂದೂ ಎನ್ನುವುದು ಧರ್ಮವೇ ಅಲ್ಲ ; ತೋಂಟದಾರ್ಯ ಸ್ವಾಮೀಜಿ
ಧಾರವಾಡ : ನಾವು ಹಿಂದೂ ವಿರೋಧಿಗಳು ಅಲ್ಲ. ಆದರೆ ಹಿಂದೂ ಎಂಬುದು ಒಂದು ಧರ್ಮವೇ ಅಲ್ಲ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ದರಾಮ ಸ್ವಾಮೀಜಿ ಹೇಳಿದರು.
ಈ ಕುರಿತು ಧಾರವಾಡದಲ್ಲಿ ಮಾತನಾಡಿದ ಇವರು. ಹಿಂದೂ ಎಂಬುದು ಧರ್ಮವಲ್ಲ ಅದು ಕೇವಲ ಜೀವನ ಕ್ರಮ. ಧರ್ಮ ಎಂದರೆ ಅದಕ್ಕೊಂದು ಸಂವಿಧಾನ ಇರಬೇಕು. ಹಾಗೆಯೇ ಒಬ್ಬ ಸ್ಥಾಪಕ ಇರಬೇಕು. ಹಾಗಾಗಿ ಲಿಂಗಾಯತ ಸ್ವತಂತ್ರ ಧರ್ಮ ಆಗಿದೆ ಎಂದರು.
ಲಿಂಗಾಯತ ಧರ್ಮಕ್ಕೆ ವಚನ ಸಾಹಿತ್ಯವೇ ಸಂವಿಧಾನವಾಗಿದೆ. ನಾವೆಲ್ಲ ಇಷ್ಟಲಿಂಗವನ್ನು ಅರ್ಚಿಸುವಂತವರಾಗಿದ್ದೇವೆ. ಹಿಂದೂ ಧರ್ಮದಲ್ಲಿ ಓರ್ವ ಪ್ರವರ್ತಕ, ಪ್ರವಾದಿ, ಯಾವುದೇ ನಿರ್ದಿಷ್ಟವಾದ ಗ್ರಂಥ ಇಲ್ಲ. ನಿರ್ದಿಷ್ಟವಾದ ದೇವರಿಲ್ಲ.
ಅಲ್ಲಿ 33 ಕೋಟಿ ದೇವರನ್ನು ಪೂಜಿಸುತ್ತಾರೆ. ಅದು ವೈದಿಕ ಧರ್ಮವಾಗಿದೆ. ಅದನ್ನೇ ಹಿಂದೂ ಧರ್ಮ ಎಂದು ಪರಿವರ್ತನೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಭಗವದ್ಗೀತೆಯಲ್ಲಿ 18 ಅಧ್ಯಾಯಗಳಿವೆ. ಅದರಲ್ಲಿ ಯಾವ ಶ್ಲೋಕದಲ್ಲಿಯೂ ಹಿಂದೂ ಎಂಬ ಪದ ಇಲ್ಲ. ವೇದ, ಉಪನಿಷತ್ಗಳಲ್ಲಿ ಆ ಪದದ ಪ್ರಯೋಗ ಆಗಿಲ್ಲ. ಹೀಗಾಗಿ ನಾವು ಸ್ವತಂತ್ರ ಧರ್ಮ ಪಡೆದಲ್ಲಿ ಹಿಂದೂ ವಿರೋಧಿ ಆಗುವುದಿಲ್ಲ ಎಂದಿದ್ದಾರೆ.

