
ಸಿಇಒ ಚಿತ್ತ ವಸತಿ ನಿಲಯಗಳತ್ತ ; ಅಧಿಕಾರಿಗಳಿಗೆ ಖಡಕ್ ಸೂಚನೆ

ಬೆಳಗಾವಿ : ಜಿಲ್ಲೆಯ ಎಲ್ಲಾ ತಾಲೂಕು ವಸತಿ ನಿಲಯಗಳ ಪರಿಸ್ಥಿತಿ ಕುರಿತು ಅಧಿಕಾರಿಗಳು ವರದಿ ನೀಡಬೇಕು. ವಸತಿ ನಿಯಗಳ ವಿದ್ಯಾರ್ಥಿಗಳ ಪೌಷ್ಟಿಕ ಆಹಾರದ ಕುರಿತು ಮೇಲ್ವಿಚಾರಣೆ ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಶಿಂಧೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಶುಕ್ರವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲೆಯಲ್ಲಿರುವ ಸರಕಾರಿ ವಿದ್ಯಾರ್ಥಿ, ವಿದ್ಯಾರ್ಥಿನಿಯರ ವಸತಿ ನಿಲಯಗಳ ನಿರ್ವಹಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಎಲ್ಲಾ ತಾಲೂಕುಗಳ ವಸತಿ ನಿಲಯಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿನ ನ್ಯೂನತೆಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಿ ವರದಿ ನೀಡಬೇಕು. ವಿದ್ಯಾರ್ಥಿಗಳಿಗೆ ನೀಡುವ ಪೌಷ್ಟೀಕ ಆಹಾರದ ಕುರಿತು ಮೇಲ್ವಿಚಾರಣೆ ಮಾಡಬೇಕು ಎಂದು ಹೇಳಿದರು.
ವಸತಿ ನಿಲಯಗಳು ಹಳೆಯ ಕಟ್ಟಡಗಳಲ್ಲಿ ಇದ್ದಲ್ಲಿ ಅವುಗಳನ್ನು ಪರಿಶೀಲನೆ ಮಾಡಬೇಕು. ಜೊತೆಗೆ ವಸತಿ ನಿಲಯಗಳ ಕಟ್ಟಡಗಳು ಸರಕಾರದ ಮಾರ್ಗಸೂಚಿ ಪ್ರಕಾರ ನಿರ್ಮಾಣವಾಗಿರುವ ಕುರಿತು ವರದಿ ಸಲ್ಲಿಸಬೇಕು. ವಸತಿ ನಿಲಯಗಳಲ್ಲಿನ ಗ್ರಂಥಾಲಯ, ಗಣಕಯಂತ್ರ ಮತ್ತು ಕೌಶಲ್ಯ ಪ್ರಯೋಗಾಲಯಗಳ ಮೇಲೆ ಹೆಚ್ಚಿನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು.
ವಸತಿ ನಿಲಯಗಳಲ್ಲಿ ನಿಗದಿಪಡಿಸಿದ ಸಂಖ್ಯೆಗಿಂತ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಜಿಲ್ಲಾ ಪಂಚಾಯತ ಕಚೇರಿಯ ಅನುಮತಿಯ ಮೇರಗೆ ಬಾಡಿಗೆ ಕಟ್ಟಡ ಪಡೆದುಕೊಂಡು ವಸತಿ ಕಲ್ಪಿಸಬೇಕು.
ವಸತಿ ನಿಲಯಗಳಲ್ಲಿನ ಶೌಚಾಲಯ ದುಸ್ಥಿತಿ ಬಗ್ಗೆ, ಬೀಸಿ ನೀರಿನ ವ್ಯವಸ್ಥೆ, ಸೋಲಾರ್ ಹೀಟರ ಸರಿಯಾದ ನಿರ್ವಹಣೆ, ಮೇಲ್ವಿಚಾರಕರ ಕೊರತೆ, ಸ್ವಚ್ಛತೆ ನಿರ್ವಹಣೆ ಕುರಿತು ಪರಿಶೀಲನೆ ಮಾಡಿ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನ್ನವರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೋಳ್ಳಿ ಅಧಿಕಾರಿಗಳಾದ ಹರ್ಷಾ ಕೆ.ಎಸ್, ಬಸವರಾಜ್ ಕುರಿಹುಲಿ, ಎಫ್.ಯು ಪೂಜೇರ, ಜಯಶ್ರೀ ನಂದೇಣ್ಣವರ, ಶಿಲ್ಪಾ ಚೌಗಲಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.