ಬೆಂಗಳೂರು : ಮಚ್ಚು ಪ್ರದರ್ಶಿಸಿ ರೀಲ್ಸ್‌ ಮಾಡಿದ ಆರೋಪದ ಮೇರೆಗೆ ಬಿಗ್‌ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಗೌಡ ಹಾಗೂ ರಜತ್‌ ಕಿಶನ್‌ ಅವರನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು.

ಮಚ್ಚು ಪ್ರದರ್ಶಿಸಿದ ಕಾರಣಕ್ಕೆ ಇಬ್ಬರನ್ನು ವಿಚಾರಣೆಗೆ ಕರೆಸಿ ಕೊನೆಗೆ ಬಂಧಿಸಲಾಗಿತ್ತು. ಮೂರು ದಿನಗಳ ಕಸ್ಟಡಿ ನಂತರ ಶುಕ್ರವಾರ ಇಬ್ಬರಿಗೂ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ವಿನಯ್‌ ಹಾಗೂ ರಜತ್‌ ಬಿಡುಗಡೆಯಾದರು.

ರಿಲೀಸ್‌ ಬಳಿಕ ವಿನಯ್‌ ಗೌಡ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಶೇರ್‌ ಮಾಡಿಕೊಂಡು ಮಹತ್ವದ ವಿಚಾರಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ವಿಡಿಯೋದಲ್ಲಿ ಸುದೀರ್ಘವಾಗಿ ಮಾತನಾಡಿರುವ ವಿನಯ್‌, “ಕರ್ನಾಟಕದ ಪ್ರತಿಯೊಬ್ಬರಿಗೂ ನನ್ನ ಕಡೆಯಿಂದ ಕ್ಷಮೆ ಕೇಳುತ್ತೇನೆ. ದಯವಿಟ್ಟು ನನ್ನನ್ನು ಕ್ಷಮಿಸಿಬಿಡಿ. ಕಳೆದ ನಾಲ್ಕು ದಿನಗಳಿಂದ ನೀವು ಟಿವಿ, ಯೂಟ್ಯೂಬ್‌ಗಳಲ್ಲಿ ನೋಡಿರಬಹುದು.

ಅಲ್ಲಿ ಒಂದು ಮಚ್ಚಿನ ಕಥೆ ನಡೀತಿದೆ. ಅದಕ್ಕಾಗಿ ನಾನು ಕ್ಷಮೆ ಕೇಳಬೇಕು. ವಿಶೇಷವಾಗಿ ನನ್ನ ಅಭಿಮಾನಿಗಳಿಗೆ, ನನ್ನ ಕುಟುಂಬಕ್ಕೆ ಪ್ರತಿಯೊಬ್ಬರಿಗೂ ಈ ವಿಡಿಯೋ ಮೂಲಕ ಸಾರಿ ಕೇಳುತ್ತಿದ್ದೇನೆ” ಎಂದಿದ್ದಾರೆ.

ಮೊದಲನೆಯದಾಗಿ ನನ್ನಿಂದ ನನ್ನ ಫ್ಯಾಮಿಲಿಗೆ ತೊಂದರೆ ಆಗಿದೆ. ನನ್ನ ಹೆಂಡತಿ, ಮಗನಿಗೆ ನೋವಾಗಿದೆ. ನನ್ನ ಸ್ನೇಹಿತರಿಗೂ ತುಂಬಾ ತೊಂದರೆಯಾಗಿದೆ. ಅವರೆಲ್ಲ ಹಗಲು ರಾತ್ರಿ ಎನ್ನದೆ ನನಗಾಗಿ ಪೊಲೀಸ್‌ ಸ್ಟೇಷನ್‌ ಬಳಿ, ಸೆಂಟ್ರಲ್‌ ಜೈಲು ಹತ್ತಿರ ನಿಂತಿದ್ದರು.

ನಮಗಾಗಿ ಕಾಯುತ್ತಾ ತುಂಬಾ ಹೆಲ್ಪ್‌ ಮಾಡಿದ್ದಾರೆ. ಈ ವೇಳೆ ನಮ್ಮ ಅಕ್ಕ ಅಪರ್ಣ ಹಾಗೂ ಬಾವ ಕೂಡ ತುಂಬಾ ಓಡಾಡಿದ್ದಾರೆ. ಹಾಗೆಯೇ ನನ್ನ ಪ್ರೀತಿಯ ಮಾಧ್ಯಮಮಿತ್ರರಿಗೂ ನಾನು ಕ್ಷಮೆ ಕೇಳುತ್ತೇನೆ” ಎಂದು ವಿನಯ್‌ ವಿಡಿಯೋದಲ್ಲಿ ತಿಳಿಸಿದ್ದಾರೆ.