Select Page

ಸಹೃದಯಿ ಸಂಜೀವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ; ಜನರ ಪ್ರೀತಿಗೆ ಮೂಕವಿಸ್ಮಿತರಾದ IPS ಡಾ. ಸಂಜೀವ್ ಪಾಟೀಲ್

ಸಹೃದಯಿ ಸಂಜೀವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ; ಜನರ ಪ್ರೀತಿಗೆ ಮೂಕವಿಸ್ಮಿತರಾದ IPS ಡಾ. ಸಂಜೀವ್ ಪಾಟೀಲ್

ಬೆಳಗಾವಿ : ತೋಟದಲ್ಲಿ ಕೆಲಸ ಮಾಡುವ ರೈತನೊಬ್ಬ ಚಪ್ಪಲಿ ಬಿಟ್ಟು ಪೊಲೀಸ್ ವಾಹನಕ್ಕೆ ನಮಿಸಿದಾಗಲೇ ನಿರ್ಧರಿಸಿದ್ದೇ, ಇಲ್ಲಿನ ಮುಗ್ಧ ಜನರ ಪರವಾಗಿ ಹಗಲಿರುಳು ಶ್ರಮಿಸಬೇಂದು. ಹಾಗೆಯೇ ಇಂದು ಬದುಕಿನ ಅವಿಸ್ಮರಣೀಯ ಕ್ಷಣ ಹೊತ್ತು ಭಾರವಾದ ಹೃದಯದಿಂದ ಸಾಗುತ್ತಿರುವೆ ಎಂದು ಹಿರಿಯ ಐಪಿಎಸ್ ಅಧಿಕಾರಿ ಡಾ. ಸಂಜೀವ್ ಪಾಟೀಲ್ ಅಭಿಪ್ರಾಯಪ್ಟರು.

ನಗರದ ಜೀರಿಗೆ ಸಭಾ ಭವನದಲ್ಲಿ ನಡೆದ ಐಪಿಎಸ್ ಡಾ. ಸಂಜೀವ್ ಪಾಟೀಲ್ ಅವರ ಬೀಳ್ಕೊಡುಗೆ ಹಾಗೂ ನೂತನ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಅವರ ಸ್ವಾಗತ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು.

ಬೆಳಗಾವಿ ಜಿಲ್ಲಾ ಪತ್ರಕರ್ತರಿಂದ ಸನ್ಮಾನ

ಬೆಳಗಾವಿ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವಾರದಲ್ಲಿ ತಾಲೂಕು ಒಂದಕ್ಕೆ ಭೇಟಿ ನೀಡಲು ತೆರಳುತ್ತಿದ್ದೆ. ಈ ಸಂದರ್ಭದಲ್ಲಿ ತೋಟದಲ್ಲಿ ಕೆಲಸ ಮಾಡಿದ್ದ ಹಿರಿಯ ವ್ಯಕ್ತಿಯೊಬ್ಬರು ರಸ್ತೆ ಬದಿ ನಿಂತಿದ್ದರು. ಈ ಸಂದರ್ಭದಲ್ಲಿ ನಮ್ಮ ವಾಹನ ನೋಡಿ ಚಪ್ಪಲಿ ಬದಿಗೆ ಬಿಟ್ಟು ನಮಸ್ಕಾರ ಮಾಡಿದ್ದು ನನ್ನನ್ನು ಅತಿಯಾಗಿ ಕಾಡಿತ್ತು. ಆಗಲೇ ನಿರ್ಧರಿಸಿದ್ದೆ ಪೊಲೀಸ್ ಇಲಾಖೆ ಮೇಲೆ ಮುಗ್ಧ ಜನ ಇಟ್ಟ ನಂಬಿಕೆ ಉಳಿಸಿಕೊಳ್ಳಬೇಕು ಹಾಗೂ ಅವರಿಗೆ ನ್ಯಾಯ ಸಿಗಬೇಕು ಎಂದು ಡಾ. ಸಂಜೀವ್ ಪಾಟೀಲ್ ಹೇಳಿದರು.

ಕಳೆದ ಹದಿನಾಲ್ಕು ತಿಂಗಳ ಹಿಂದೆ ಅಳುಕಿನಲ್ಲಿ ಬಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಪ್ರಾರಂಭಿಸಿದ್ದೆ. ಆದರೆ ಇಲ್ಲಿನ ವೈವಿಧ್ಯಮಯ ಸಂಸ್ಕೃತಿ ಹಾಗೂ ಮುಗ್ಧ ಜನರ ಪ್ರೀತಿ ನನ್ನನ್ನು ಮತ್ತಷ್ಟು ಕೆಲಸ ಮಾಡಲು ಪ್ರೇರೇಪಿಸಿತು. ಇಲಾಖೆ ಅಧಿಕಾರಿಗಳು ಹಾಗೂ ಜನರ ಸಹಕಾರದಿಂದ ಜಿಲ್ಲೆಯ ಜನಸಾಮಾನ್ಯರ ಸೇವೆ ಮಾಡಿರುವ ಸಂತೃಪ್ತಿ ನನಗಿದೆ ಎಂದರು.

ಜಿಲ್ಲೆಯ ಜನ ನನಗೆ ಈ ಮಟ್ಟಿಗೆ ತಮ್ಮ‌ ಹೃದಯದಲ್ಲಿ ಮಹತ್ವದ ಸ್ಥಾನ ಕೊಡುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಆದರೆ ದೂರದ ಊರಿನಿಂದ ಬಂದು ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡಿದ್ದು ಹಾಗೂ ಅವರು ತೋರಿರುವ ಪ್ರೀತಿಯನ್ನು ಈ ಜನ್ಮ ಇರುವರೆಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಡಾ. ನಿತೇಶ್ ಪಾಟೀಲ್. ಕಳೆದ ಹದಿನಾಲ್ಕು ತಿಂಗಳು ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರ ಜೊತೆ ಕೆಲಸ ಮಾಡಿದ್ದು ಅತ್ಯಂತ ಸಂತೋಷ ತರಿಸಿದೆ. ಬೆಳಗಾವಿ ಜಿಲ್ಲೆಯಲ್ಲಿ ನೂರಾರು ಕಿಲೋಮೀಟರ್ ಸುತ್ತಾಡಿ ಜನರ ಸೇವೆ ಮಾಡಿದ್ದು ಯಾವತ್ತೂ ಮರೆಯಲು ಸಾಧ್ಯವಿಲ್ಲ. ‌

ನಿರಂತರ ಓಡಾಟ ಹಾಗೂ ಜಿಲ್ಲೆಯ ಮೂಲೆ ಮೂಲೆಗೂ ಸುತ್ತಿ ಕೆಲಸ ಮಾಡುವ ಇವರ ರೀತಿ ಆಶ್ಚರ್ಯ ತರಿಸಿತ್ತು. ನಿರ್ಗಮನ ಸಂದರ್ಭದಲ್ಲಿ ಜನ ಈ ರೀತಿಯಲ್ಲಿ ಕೃತಜ್ಞತೆ ಸಲ್ಲಿಸುತ್ತಿರುವುದು ಒಬ್ಬ ಉತ್ತಮ ಅಧಿಕಾರಿ ಯಾವ ಮಟ್ಟಿನಲ್ಲಿ ಕೆಲಸ ಮಾಡಿದ್ದಾರೆ ಎಂಬುದು ತೋರಿಸುತ್ತದೆ ಎಂದರು.

ನೂತನ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ಮಾತನಾಡಿ. ಡಾ. ಸಂಜೀವ್ ಪಾಟೀಲ್ ಅವರು ಸಲ್ಲಿಸಿದ ಸೇವೆ ಹಾಗೂ ಅವರ ಮೇಲೆ ಜಿಲ್ಲೆಯ ಜನ ಇಟ್ಟಿರುವ ಪ್ರೀತಿ ಅದ್ಭುತವಾದದ್ದು. ನಾನು ಈ ಹಿಂದೆ ಕೆಲಸ ಮಾಡಿದ ಜಿಲ್ಲೆಯಲ್ಲಿ ಸಿಕ್ಕ ಜನಮನ್ನಣೆಗಿಂತಲೂ ಡಾ. ಸಂಜೀವ್ ಪಾಟೀಲ್ ಹೆಚ್ಚಿನದನ್ನು ಪಡೆದಿದ್ದು ನೋಡಿ ಖುಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ವಿವಿಧ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳು ಎಸ್ಪಿ ಡಾ. ಸಂಜೀವ್ ಪಾಟೀಲ್ ಅವರ ಸೇವೆಯನ್ನು ಕೊಂಡಾಡಿದರು. ಕೆಳ ಹಂತದ ಅಧಿಕಾರಿಗಳ ಆರೋಗ್ಯ ಹಾಗೂ ಸಮಸ್ಯೆ ಕುರಿತು ಸ್ಪಂದಿಸುವ ರೀತಿ. ಯಾವುದೇ ಪ್ರಕರಣ ಯಶಸ್ವಿಯಾದಾಗ ಅದರ ಕ್ರೆಡಿಟ್ ಅನ್ನು ಅಧಿಕಾರಿಗಳಿಗೆ ಕೊಡುತ್ತಿದ್ದ ರೀತಿ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇವರು ಪ್ರತಿ ಕ್ಷಣ ಕೊಡುತ್ತಿದ್ದ ಎಚ್ಚರಿಕೆ ಈ ಎಲ್ಲವೂ ನಮಗೆ ಒಂದು ಪಾಠ ಎಂದು ಅನಿಸಿಕೆ ಹಂಚಿಕೊಂಡರು.

ತೆರೆದ ವಾಹನದಲ್ಲಿ ಡಾ. ಸಂಜೀವ್ ಪಾಟೀಲರಿಗೆ ಬೀಳ್ಕೊಡುಗೆ

ಈ ಸಂದರ್ಭದಲ್ಲಿ ಜಿಲ್ಲೆಯ ಹಿರಿಯ ಪತ್ರಕರ್ತರು, ಕನ್ನಡಪರ ಹೋರಾಟಗಾರರು, ರೈತಪರ ಹೋರಾಟಗಾರರು, ದಲಿತ ಸಂಘಟನೆ ಸದಸ್ಯರು ಸೇರಿದಂತೆ ಡಾ. ಸಂಜೀವ್ ಪಾಟೀಲ್ ಅವರ ಅಭಿಮಾನಿ ಬಳಗದ ವತಿಯಿಂದ ಸನ್ಮಾನ ಕಾರ್ಯಕ್ರಮ ಜರುಗಿತು.

ತೆರೆದ ವಾಹನದಲ್ಲಿ ಡಾ. ಸಂಜೀವ್ ಪಾಟೀಲ್ ದಂಪತಿಗಳನ್ನು ಮೆರವಣಿಗೆ ಮೂಲಕ ಪೊಲೀಸ್ ಅಧಿಕಾರಿಗಳು ಬೀಳ್ಕೊಡುಗೆ ನೀಡಿದ್ದು ವಿಶೇಷವಾಗಿತ್ತು.

Advertisement

Leave a reply

Your email address will not be published. Required fields are marked *

error: Content is protected !!