ಸವದಿ, ಹೆಬ್ಬಾಳ್ಕರ್ ಗೆ ಮಂತ್ರಿ ಸ್ಥಾನ ಯಾವಾಗ..?
ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಹಿ ನೀಡುತ್ತಾ ಕಾಂಗ್ರೆಸ್?
ಬೆಳಗಾವಿಯಲ್ಲಿ 11 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು
ಬೆಳಗಾವಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಸಚಿವಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲ ಶಾಸಕರಿಗೆ ಮೊಲದ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಬೆಳಗಾವಿ ಜಿಲ್ಲೆಯ ಪರವಾಗಿ ಶಾಸಕ ಸತೀಶ್ ಜಾರಕಿಹೊಳಿ ಅವರಿಗೆ ಮಾತ್ರ ಸಿಎಂ ಸಿದ್ದರಾಮಯ್ಯ ಜೊತೆ ಪ್ರಮಾಣವಚನಕ್ಕೆ ಅವಕಾಶ ಸಿಕ್ಕಿದ್ದು ಹೊರತುಪಡಿಸಿ, ಉಳಿದ ಶಾಸಕರಿಗೆ ಕಾಯುವುದು ಅನಿವಾರ್ಯವಾಗಿದೆ.
ಪ್ರಮುಖವಾಗಿ ಎರಡು ಬಾರಿ ಶಾಸಕಿಯಾಗಿ ಆಯ್ಕೆಯಾದ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಅದ್ಬುತ ಗೆಲುವು ಸಾಧಿಸಿದ್ದ ಲಕ್ಷ್ಮಣ ಸವದಿ ಸಚಿವಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಇನ್ನೂ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಮತ್ತು ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಕೂಡಾ ಸಚಿವಸ್ಥಾನದ ನಿರೀಕ್ಷೆಯಲ್ಲಿದ್ದಾರೆ.

ಈ ಬಾರಿ ಕಾಂಗ್ರೆಸ್ ಪಾಲಿಗೆ ಬೆಳಗಾವಿ ಸಿಹಿಯಾಗಿದೆ. ಬಿಜೆಪಿ ಭದ್ರಕೋಟೆಯಾಗಿದ್ದ ಕ್ಷೇತ್ರಗಳಲ್ಲಿ 18 ವಿಧಾನಸಭಾ ಕ್ಷೇತ್ರದ ಪೈಕಿ ಹನ್ನೊಂದು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ಸಿಗೆ ಭರ್ಜರಿ ಕೊಡುಗೆ ನೀಡುವಲ್ಲಿ ಜಿಲ್ಲಾ ನಾಯಕರು ಯಶಸ್ವಿಯಾಗಿದ್ದಾರೆ. ಈ ಕಾರಣದಲ್ಲಿ ಜಿಲ್ಲೆಗೆ ಮೂರು ಸಚಿವಸ್ಥಾನದ ನಿರೀಕ್ಷೆಯಲ್ಲಿ ನಾಯಕರಿದ್ದು ಈಗಾಗಲೆ ಒಬ್ಬರಿಗೆ ಅವಕಾಶ ಲಭಿಸಿದೆ. ಇನ್ನೂ ಇಬ್ಬರಿಗೆ ಸಚಿವಸ್ಥಾನ ಸಿಗುವ ನಿರೀಕ್ಷೆಯಲ್ಲಿ ಜಿಲ್ಲೆಯ ಜನ ಇದ್ದು ಕಾಂಗ್ರೆಸ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು.
ವೀರಶೈವ ಲಿಂಗಾಯತರಿಗೆ ಸಿಗುತ್ತಾ ನ್ಯಾಯ : ಪ್ರಮುಖವಾಗಿ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್ ನಿಂದ ಏಳು ಜನ ವೀರಶೈವ ಲಿಂಗಾಯತ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಕಾನೇಕರ ಬೃಹತ್ ಅಂತರದ ಗೆಲುವು ಸಾಧಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಗಣೇಶ್ ಹುಕ್ಕೇರಿ, ರಾಜು ಕಾಗೆ, ಮಹಾಂತೇಶ್ ಕೌಜಲಗಿ, ಅಶೋಕ್ ಪಟ್ಟಣ, ಬಾಬಾಸಾಹೇಬ್ ಪಾಟೀಲ್, ಗೆಲುವು ಸಾಧಿಸಿದ್ದು ಕನಿಷ್ಠ ಇಬ್ಬರಿಗಾದರೂ ಸಚಿವಸ್ಥಾನ ಸಿಗುವ ನಿರೀಕ್ಷೆಯಲ್ಲಿ ವೀರಶೈವ ಲಿಂಗಾಯತ ಸಮುದಾಯ ಇದೆ.

ನೂತನ ಸಚಿವರ ಮೇಲಿದೆ ಮಹತ್ವದ ಜವಾಬ್ದಾರಿ : ಹೌದು ಈಗಾಗಲೇ ಕಾಂಗ್ರೆಸ್ ಗೆಲುವಿನ ಉತ್ಸಾಹದಲ್ಲಿದ್ದು ಜಿಲ್ಲೆಯ ಪ್ರಮುಖ ಶಾಸಕರು ಸಚಿವಸ್ಥಾನದ ಲಾಬಿ ನಡೆಸಿದ್ದಾರೆ. ಈಗಾಗಲೇ ಶಾಸಕ ಸತೀಶ್ ಜಾರಿಹೊಳಿ ಅವರಿಗೆ ಸಚಿವಸ್ಥಾನ ಲಭಿಸಿದ್ದು ಜೊತೆಗೆ ಹೊಸ ಸಚಿವರ ಮೇಲೆ ಮಹತ್ವದ ಜವಾಬ್ದಾರಿ ಇದೆ. ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಸರ್ಕಾರದ ಪುಂಡಾಟಿಕೆ ತಗೆಟ್ಟುವುದು ಮತ್ತು ಸುವರ್ಣ ವಿಧಾನಸೌಧಕ್ಕೆ ಕಚೇರಿ ಸ್ಥಳಾಂತರ ಮಾಡುವ ಕುರಿತಾಗಿ ಇನ್ನೂ ಅನೇಕ ಜವಾಬ್ದಾರಿ ನೂತನ ಸಚಿವರ ಮೇಲಿದೆ.
***********************
ಸವದಿ & ಹೆಬ್ಬಾಳ್ಕರ್ ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿಗಳು : ಅಥಣಿ ಟಿಕೆಟ್ ಕೈತಪ್ಪಿದ್ದಕ್ಕೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಲಕ್ಷ್ಮಣ ಸವದಿ ಬೃಹತ್ ಅಂತರದ ಗೆಲುವು ಸಾಧಿಸಿದ್ದರು. ಅಷ್ಟೇ ಅಲ್ಲದೆ ಜಿಲ್ಲೆಯ ಕೆಲ ಕ್ಷೇತ್ರದಲ್ಲಿ ಪ್ರಭಾವ ಬೀರಿದ್ದರು. ಈ ಲಾಭ ಕಾಂಗ್ರೆಸ್ ಪಕ್ಷಕ್ಕೆ ಆಗಿದ್ದು ಸತ್ಯ. ಹಾಗೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಹೋರಾಡಿ ಅವರ ಆಪ್ತರನ್ನು ಸೋಲಿಸಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಸಚಿವಸ್ಥಾನದ ಪ್ರಭಲ ಆಕಾಂಕ್ಷಿಗಳಾಗಿದ್ದಾರೆ. ಈ ಹಿನ್ನಲೆಯಲ್ಲಿ ಸವದಿ ಹಾಗೂ ಹೆಬ್ಬಾಳ್ಕರ್ ಅವರಿಗೆ ಸಚಿವಸ್ಥಾನ ಸಿಗುವ ನಿರೀಕ್ಷೆ ಇದೆ.
***********************


