
ಸಾಕಷ್ಟು ಶಕುನಿ ರಾಜಕಾರಣ ಮಾಡಿದ್ದಾರೆ : ಸಾಹುಕಾರ್ ಗೆ ಟಾಂಗ್ ಕೊಟ್ಟರಾ ಸಚಿವೆ ಹೆಬ್ಬಾಳ್ಕರ್

ಬೆಳಗಾವಿ : ಮೊದಲಿನಿಂದಲೂ ಸಾಕಷ್ಟು ಜನ ಶಕುನಿ ರಾಜಕಾರಣ ಮಾಡಿದ್ದಾರೆ. ಸಿಎಂ ಹಾಗೂ ಡಿಸಿಎಂ ಮಧ್ಯೆ ಎಷ್ಟೇ ಒಡಕು ಉಂಟುಮಾಡಲು ಪ್ರಯತ್ನಿಸಿದ್ದರು ಅದು ಯಶಸ್ವಿಯಾಗುವುದಿಲ್ಲ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ವಿರುದ್ಧ ಸಚಿವೆ ಹೆಬ್ಬಾಳಕರ್ ಹರಿಹಾಯ್ದರು.
ಮಂಗಳವಾರ ಸವದತ್ತಿ ಪಟ್ಟಣದಲ್ಲಿ ಮಾತನಾಡಿ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ ಮಧ್ಯೆ ವಿಷ ಬೀಜ ಬಿತ್ತುವ ಉದ್ದೇಶದಿಂದ ಬಿಜೆಪಿ ನಾಯಕರು ಹೇಳಿಕೆ ನೀಡುತ್ತಿದ್ದಾರೆ. ಆದರೆ ಸುಧೀರ್ಘ ರಾಜಕೀಯ ಅನುಭವ ಇರುವ ಇಬ್ಬರು ನಾಯಕರ ನಡುವೆ ಹುಳಿ ಹಿಂಡಲು ಸಾಧ್ಯವಿಲ್ಲ ಎಂದರು.
ರಾಜ್ಯಾಧ್ಯಕ್ಷರಿಂದ ಒಳ ಒಪ್ಪಂದದ ರಾಜಕೀಯ ನಡೆಯುತ್ತಿದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಯತ್ನಾಳ್ ಅವರ ಬಗ್ಗೆ ಅಪಾರ ಗೌರವಿದೆ. ಅವರಿಗೆ ಇಂತಹ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಹೇಳಿದರು. ಒ
ಶಾಸಕ ಯತ್ನಾಳ್ ಅವರು, ಬೇಕಿದ್ದರೆ ತಮ್ಮ ಪಕ್ಷದ ಬಗ್ಗೆ ಮಾತಾಡಲಿ, ಇನ್ನೊಂದು ಪಕ್ಷದ ಬಗ್ಗೆ ಮಾತನಾಡುವುದು ಬೇಡ. ಅವರಿಗೆ ಗೊಂದಲ ಸೃಷ್ಟಿಸುವುದೇ ಕೆಲಸ. ಅನಾವಶ್ಯಕ ಹೇಳಿಕೆಗಳಿಂದ ಗೊಂದಲ ಸೃಷ್ಟಿ ಮಾಡಿ , ಸಿಎಂ, ಡಿಸಿಎಂ ನಡುವೆ ತಂದಿಡುವ ಕೆಲಸವನ್ನು ಮೊದಲು ಬಿಡಲಿ ಎಂದು ಸಚಿವರು ತಿರುಗೇಟು ನೀಡಿದರು.
ಸಿಎಂ, ಡಿಸಿಎಂ ಇಬ್ಬರೂ ಮುತ್ಸದ್ದಿ ರಾಜಕಾರಣಿಗಳು. ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಮಾಡುವುದು ಪಕ್ಷದ ಶಾಸಕರು ಹಾಗೂ ಹೈಕಮಾಂಡೇ ಹೊರತು ಬಿಜೆಪಿ ರಾಜ್ಯಾಧ್ಯಕ್ಷರಲ್ಲ. ಒಳ ಒಪ್ಪಂದ ರಾಜಕಾರಣದ ಮಾತನ್ನು ಇನ್ಮುಂದಾದರೂ ಯತ್ನಾಳ್ ನಿಲ್ಲಿಸಲಿ ಎಂದು ಹೇಳಿದರು.
ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯ
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೆ ಪದೇ ಅನ್ಯಾಯ ಆಗುತ್ತಿದೆ. ಮೊದಲು ಅದನ್ನು ಸರಿ ಪಡಿಸಲಿ. ಬಳಿಕ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರು ಮಾತನಾಡಲಿ. ಶೀಘ್ರವೇ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಯಾಗಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.