ರಾಮದುರ್ಗ‌ : ಸ್ನಾನ ಮಾಡಲು ಚೆಕ್‌ಡ್ಯಾಂನಲ್ಲಿ ಇಳಿದಿದ್ದ ಇಬ್ಬರು ಮಕ್ಕಳು ಈಜು ಬಾರದೆ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಾಲೂಕಿನ ಉದಪುಡಿ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಗ್ರಾಮದ ಈರಣ್ಣ ಸಿದ್ದಪ್ಪ ಶಿರಸಂಗಿ (13) ಮತ್ತು ಗುರವ್ವ ಸಿದ್ದಪ್ಪ ಶಿರಸಂಗಿ (11) ಮೃತ ದುರ್ದೈವಿಗಳಾಗಿದ್ದಾರೆ. ಸ್ನಾನ ಮಾಡಲೆಂದು ಇಬ್ಬರು ಮಕ್ಕಳು ಗ್ರಾಮದ ಹಣಮಂತಗೌಡ ಪಾಟೀಲ ಎಂಬುವರ ಜಮೀನಿನಲ್ಲಿರುವ ಚೆಕ್‌ಡ್ಯಾಂಗೆ ಇಳಿದಿದ್ದಾರೆ.

ಈಜು ಬಾರದೆ ಆಕಸ್ಮಾತ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಮೃತ ಮಕ್ಕಳ ತಂದೆ ಸಿದ್ದಪ್ಪ ಶಿರಸಂಗಿ ಕಟಕೋಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಘಟನೆ ಕುರಿತ ಮಾಹಿತಿ ತಿಳಿದ ಕಟಕೋಳ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ಕೋಣ್ಣೂರೆ ಸ್ಥಳಕ್ಕೆ ಆಗಮಿಸಿ ಘಟನೆ ವಿವರ ಪಡೆದುಕೊಂಡಿದ್ದಾರೆ.