
ಕೊಲೆ ಆರೋಪ ; ನಟಿ ಪವಿತ್ರ ಗೌಡ ವಶಕ್ಕೆ ಪಡೆದ ಪೊಲೀಸರು

ಮೈಸೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಸಧ್ಯ ಈಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಪವಿತ್ರ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೂ ನಟ ದರ್ಶನ್ ಅವರಿಗೂ ನಂಟು ಇರುವುದರಿಂದ ಬಂಧನಕ್ಕೆ ಒಳಪಡಿಸಿದ್ದಾರೆ ಎಂದು ಹೇಳಲಾಗಿದೆ. ಮೈಸೂರಿನ ಕೆಂಪಯ್ಯನ ಹುಂಡಿ ಗ್ರಾಮದ ಬಳಿಯಿರುವ ಫಾರ್ಮ್ ಹೌಸ್ ನಲ್ಲಿ ಅವರನ್ನು ಬಂಧನಕ್ಕೊಳಪಡಿಸಲಾಗಿದ್ದು, ಬೆಂಗಳೂರಿಗೆ ಕರೆ ತರಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ವಿಚಾರಣೆಗೊಳಪಡಿಸಿದ್ದರು. ಈ ವೇಳೆ ಬಂಧಿತರು ನಟ ದರ್ಶನ್ ಹೆಸರು ಬಾಯಿಬಿಟ್ಟಿದ್ದರೆನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ದರ್ಶನ್ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣದಲ್ಲಿ ಒಟ್ಟು 10 ಜನರನ್ನು ಬಂಧನಕ್ಕೊಳಪಡಿಸಲಾಗಿದೆ.
ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಮೆಸೇಜ್ ಗಳನ್ನು ಕಳಿಸಿದ್ದ ಕಾರಣಕ್ಕೆ ರೇಣುಕಸ್ವಾಮಿಯವರ ಕೊಲೆ ನಡೆದಿದ್ದು, ದರ್ಶನ್ ಅವರ ಮೌಖಿಕ ಆದೇಶದ ಮೇಲೆ ಆರೋಪಿಗಳು ಈ ಹತ್ಯೆಯನ್ನು ನಡೆಸಿದ್ದಾರೆಂದು ಹೇಳಲಾಗಿದೆ.
ದರ್ಶನ್ ಜೊತೆಗೆ ಆತ್ಮೀಯ ಸಂಪರ್ಕ ಹೊಂದಿದ್ದ ನಟಿ ಪವಿತ್ರಾ ಗೌಡ, ಈ ಬಗ್ಗೆ ದರ್ಶನ್ ಅವರಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದರು. ಇದರಿಂದ ಕುಪಿತರಾಗಿದ್ದ ದರ್ಶನ್ ರೇಣುಕಾಸ್ವಾಮಿ ಬಗ್ಗೆ ಕೋಪ ತಾಳಿದ್ದರು.