ತುಂಬಿ ಹರಿಯುತ್ತಿರುವ ಕೃಷ್ಣಾ ನದಿ ; ಕುಡಚಿ ಸೇತುವೆ ಜಲಾವೃತ
ಚಿಕ್ಕೋಡಿ : ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಇರುವ ಕುಡಚಿ ಸೇತುವೆ ಜಲಾವೃತಗೊಂಡಿದೆ.
ಜಮಖಂಡಿ ಹಾಗೂ ಉಗಾರ್ ನಡುವೆ ಸಂಪರ್ಕ ಕಲ್ಪಿಸುವ ಕುಡಚಿ ಸೇತುವೆ ಜಲಾವೃತಗೊಂಡ ಹಿನ್ನಲೆಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ರಸ್ತೆ ಸಂಚಾರ ಬಂದ್ ಮಾಡಿ ಕುಡಚಿ ಪೊಲೀಸ್ ಠಾಣೆ ಸಿಬ್ಬಂದಿ ಕ್ರಮ ಕೈಗೊಂಡಿದ್ದಾರೆ.
ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಮಳೆ ಆರ್ಭಟ ಮುಂದುವರಿದ ಪರಿಣಾಮ ದೂಧಗಂಗಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳವಾಗಿದೆ. ಯಕ್ಸಂಬಾದ ದತ್ತವಾಡ ರಸ್ತೆಯ ತೋಟಪಟ್ಟಿಯ ಜಾನುವಾರುಗಳನ್ನು ರೈತರು ಬೇರೆಡೆಗೆ ಸ್ಥಳಾಂತರ ಮಾಡುತ್ತಿದ್ದಾರೆ.
ಕಳೆದ ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಚಿಕ್ಕೋಡಿ ತಾಲೂಕಿನ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳಿಗೆ ನೀರಿನ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
ದೂಧಗಂಗಾ ನದಿಗಳಿಗೆ ನೀರು ಏರಿಕೆಯಾಗುತ್ತಿದೆ.ಇದರಿಂದ ಯಕ್ಸಂಬಾ ಪಟ್ಟಣದ ದಾನವಾಡ ರಸ್ತೆ ತೋಟಪಟ್ಟಿಯಲ್ಲಿ ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ.
ಕೃಷ್ಣಾ ನದಿಗೆ ಸಧ್ಯ ರಾಜಾಪುರ್ ಬ್ಯಾರೆಜ್ ನಿಂದ 1 ಲಕ್ಷ 50 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಹೆಚ್ಚಾಗಿದೆ. ನದಿ ನೀರಿನ ಮಟ್ಟ ಏರಿಕೆಯಾದ ಹಿನ್ನೆಲೆ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 8 ಸೇತುವೆಗಳು ಜಲಾವೃತಗೊಂಡಿವೆ.
ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮ ದೇವತೆ ಬಂಗಾಲಿ ಬಾಬಾ ದೇವಸ್ಥಾನದ ಸುತ್ತಲು ದೂದಗಂಗಾ ನದಿ ನೀರು ಆವರಿಸಿದೆ. ಇನ್ನೂ ಚಿಕ್ಕೋಡಿ ತಾಲೂಕಿನ ದತ್ತವಾಡ – ಮಲ್ಲಿಕವಾಡ, ನಿಪ್ಪಾಣಿ ತಾಲೂಕಿನ ಭೋಜ – ಕಾರದಗಾ, ಭೋಜವಾಡಿ – ಕುನ್ನೂರು ಸೇತುವೆಗಳು ಜಲಾವೃತಗೊಂಡಿವೆ.


