ದಲಿತರ ಮೇಲಿನ ದೌರ್ಜನ್ಯ ಪ್ರಕರಣ ; 97 ಜನರಿಗೆ ಹೈಕೋರ್ಟ್ ಜಾಮೀನು
ಧಾರವಾಡ : 2014 ರಲ್ಲಿ ದಲಿತರ ಮೇಲಿನ ಹಲ್ಲೆ ಹಾಗೂ ಗುಡಿಸಲು ಸುಟ್ಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ 97 ಜನರಿಗೆ ಇಲ್ಲಿನ ಧಾರವಾಡ ಹೈಕೋರ್ಟ್ ಪೀಠ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.
ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಕೊಪ್ಪಳ ಜಿಲ್ಲಾ ಸತ್ರ ನ್ಯಾಯಾಲಯ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ಮೂವರಿಗೆ ಐದು ವರ್ಷಗಳ ಜೈಲು ಶಿಕ್ಷೆ ನೀಡಿ ಆದೇಶಿಸಿತ್ತು.
ಬಳಿಕ ಅಪರಾಧಿಗಳು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶಗೌಡ ಮತ್ತು ಶಿವಲಿಂಗೇಗೌಡ ಅವರನ್ನೊಳಗೊಂಡ ಪೀಠವು, ಆರೋಪಿತರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.
ಅಪರಾಧಿಗಳ ಪರವಾಗಿ ಅವಿನಾಶ ಅಂಗಡಿ, ನೀಲೇಂದ್ರ ಗುಂಡೆ, ಸಂತೋಷ ಮಲಗೌಡರ, ವಿ.ಎಂ.ಶೀಲವಂತ, ಆನಂದ ಕೊಳ್ಳಿ, ಈರಣ್ಣ ಕಬ್ಬೂರ ಇತರ ವಕೀಲರು ವಾದ ಮಂಡಿಸಿದ್ದರು.


