
24 ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ; ಶಾಸಕರ ಮನವಿಗೂ ಡೋಂಟ್ ಕೇರ್

ಚನ್ನಮ್ಮನ ಕಿತ್ತೂರು : ಕುಲವಳ್ಳಿ ಸಾಗುವಳಿ ಭೂಮಿಯ ಹಕ್ಕು ಪತ್ರ ನೀಡುವಂತೆ 24 ದಿನದಿಂದ ಅನಿರ್ದಿಷ್ಟ ಅಹೋರಾತ್ರಿ ಹೋರಾಟವನ್ನು ಕೈ ಬಿಡುವಂತೆ ಶಾಸಕ ಬಾಬಾಸಾಹೇಬ ಪಾಟೀಲ ಮನವಿ ಮಾಡಿದರು.
ಇಲ್ಲಿಯ ತಹಶೀಲ್ದಾರ ಕಚೇರಿಯ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟ ಅಹೋರಾತ್ರಿ ಹೋರಾಟದಲ್ಲಿ ಮಾತನಾಡಿ, ಕುಲವಳ್ಳಿ ಸಾಗುವಳಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರ ಗಮನಕ್ಕೆ ತರಲಾಗಿದೆ.
ಸಚಿವರು ಜಿಲ್ಲಾಧಿಕಾರಿ ಅವರ ಜೊತೆಗೆ ಚರ್ಚೆ ಮಾಡಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಯಾವ ರೀತಿ ಪಹಣಿ ಪತ್ರದಲ್ಲಿ ರೈತರ ಹೆಸರು ದಾಖಲಿಸಬೇಕು ಎಂದು ಆಲೋಚನೆ ನಡೆಸಿದ್ದಾರೆ. ಇದಕ್ಕೆ ಸಮಯ ಬೇಕಾಗುತ್ತದೆ. ಸಚಿವರು ಸಹ ರೈತರ ಸಾಗುವಳಿ ಭೂಮಿಯನ್ನು ಮತ್ತೊಮ್ಮೆ ಸರ್ವೆ ಮಾಡಿಸಿ ಪಿಟಿ ಸೀಟ್ ನಕ್ಷೆ ನೀಡುವಂತೆ ತಿಳಿಸಿದ್ದಾರೆ ಎಂದರು.
ರೈತರಿಗೆ ಯಾವುದೇ ತೊಂದರೆ ನೀಡಿಲು ಬಿಡುವುದಿಲ್ಲ. ನಿಮ್ಮ ಸಾಗುವಳಿ ಭೂಮಿಯನ್ನು ಮೊದಲಿನಂತೆ ಉಳಮೆ ಮಾಡಿಕೊಂಡು ಜೀವನ ಸಾಗಿಸಿ. ನಿಮ್ಮಗೆ ಎಲ್ಲ ರೀತಿ ಸಹಕಾರ ನೀಡುತ್ತೇನೆ ಎಂದರು.
ರೈತ ಹೋರಾಟಗಾರ್ತಿ ನಾಗರತ್ನ ಪಾಟೀಲ ಮಾತನಾಡಿ, ರೈತರು 23 ದಿನಗಳಿಂದ ಅನಿರ್ದಿಷ್ಟ ಹೋರಾಟ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಅವರು ರೈತ ಸಮಸ್ಯೆ ಕೇಳುವ ಪ್ರಯತ್ನ ಮಾಡುತ್ತಿಲ್ಲ. ಆಗಿನ ಸಚಿವ ಕಾಗೋಡು ತಿಮ್ಮಪ್ಪ ಅವರು ರೈತರಿಗೆ ಪಿಟಿ ಸೀಟ್ ನಕ್ಷೆ ನೀಡಿದ್ದಾರೆ.
ಅದರ ಆಧಾರದ ಮೇಲೆ ಪಹಣಿ ಪತ್ರದಲ್ಲಿ ರೈತರ ಹೆಸರು ದಾಖಲಿಸಬೇಕು. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಅವರು ಬಂದು ರೈತರಿಗೆ ಅಧಿಕೃತವಾಗಿ ಭರವಸೆ ಕೊಡಬೇಕು. ಅಲ್ಲಿಯವರೆಗೆ ಅನಿರ್ದಿಷ್ಟ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.
ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದ ಅಧ್ಯಕ್ಷ ಎಂ. ಎಫ್ ಜಕಾತಿ, ಪ್ರಧಾನ ಕಾರ್ಯದರ್ಶಿ ಅಪ್ಪೇಶ ದಳವಾಯಿ, ಕಿಶೋರ್ ಮಿಠಾರಿ ಮಾತನಾಡಿದರು. ವಿಜಯಕುಮಾರ ಶಿಂಧೆ, ದಶರಥ ಮಡಿವಾಳರ, ಸೋಮಯ್ಯ ನಿಂಗಾಪೂರಮಠ,
ತವನಪ್ಪ ಬೇಟಗೇರಿ, ಮಾರುತಿ ಕಲ್ಲೂರಿ, ತೋಪಿಕ್ ಸುತಗಟ್ಟಿ, ಸುರೇಶ ಮಡಿವಾಳರ, ಕಸ್ತೂರಿ ಮಾಳನ್ನವರ, ಕಮಲವ್ವ ಕಡಕೋಳ, ಸಾವಕ್ಕ ತೊಟಗಿ, ಮಂಜುಳಾ ಕಡ್ಡೆನ್ನವರ ಸೇರಿದಂತೆ ಅನೇಕ ರೈತರು ಇದ್ದರು.