ಹೊಸ ರೇಷನ್ ಕಾರ್ಡ್ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಸಿಹಿ ಸುದ್ದಿ
ಬೆಳಗಾವಿ : ಹೊಸ ಪಡಿತರ ಚೀಟಿಗಾಗಿ ಕಾಯುತ್ತಿದ್ದ ಜನರಿಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಈಗಾಗಲೇ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಅರ್ಹರಿಗೆ ಕೂಡಲೇ ಕಾರ್ಡ್ ವಿತರಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ವಿಧಾನಸಭೆ ಕಲಾಪದಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು. ಬಾಕಿ ಇರುವ ಎಲ್ಲಾ 2.95 ಲಕ್ಷ ಅರ್ಜಿಗಳನ್ನು ಪರಿಶೀಲಿಸಿ ಮಾರ್ಚ್ 31 ರ ಒಳಗೆ ಎಲ್ಲ ಅರ್ಹರಿಗೂ ಬಿಪಿಎಲ್ ಪಡಿತರ ಚೀಟಿ ವಿತರಿಸಲಾಗುವುದು. ನಂತರ ಏಪ್ರಿಲ್ನಲ್ಲಿ ಹೊಸದಾಗಿ ಪಡಿತರ ಚೀಟಿ ಪಡೆಯಲು ಅರ್ಜಿ ಆಹ್ವಾನಿಸ ಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ನಾಲ್ಕು ಚಕ್ರ ವಾಹನವುಳ್ಳವರ ಪಡಿತರ ಚೀಟಿ ರದ್ದು ಪ್ರಕರಣ ಸಂಬಂಧ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಕೇಳಿದ ಪ್ರಶ್ನೆಗೆ ದನಿಗೂಡಿಸಿದ ವಿಪಕ್ಷನಾಯಕ ಆರ್.ಅಶೋಕ್ ಬಿಪಿಎಲ್ ಕಾರ್ಡ್ ಕೊಡುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ. ಐದು ಗ್ಯಾರಂಟಿಗಳಿಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಾಗ ಬಾರದು ಎಂದು ಕೊಡುತ್ತಿಲ್ವಾ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು, ಕಳೆದ ಸರ್ಕಾರದ ಅವಧಿಯಲ್ಲೇ ಹೊಸ ಪಡಿತರ ಚೀಟಿಗಾಗಿ 2.95 ಲಕ್ಷ ಅರ್ಜಿಗಳು ಬಂದಿವೆ. ಇದರಲ್ಲಿ ಈಗಾಗಲೇ 57 ಸಾವಿರ ಕಾರ್ಡು ಗಳನ್ನು ವಿತರಿಸಲಾಗಿದೆ. ಉಳಿದ ಅರ್ಜಿಗಳನ್ನು ಪರಿಶೀಲಿಸಿ ಮಾ.31ರೊಳಗೆ ಅರ್ಹರಿಗೆ ಪಡಿತರ ಚೀಟಿ ವಿತರಿಸಲಾಗು ವುದು.
ಈ ಕೆಲಸ ಮುಗಿದ ನಂತರ ಏಪ್ರಿಲ್ನಲ್ಲಿ ಮತ್ತೆ ಹೊಸ ಪಡಿತರ ಕಾರ್ಡುಗಳಿಗೆ ಅರ್ಜಿ ಆಹ್ವಾನಿಸಲಾಗುವುದು ಎಂದರು.
ಇನ್ನು, ನಯನಾ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹಿಂದಿನ ಸರ್ಕಾರದಲ್ಲಿ ಬಿಪಿಎಲ್ ಕಾರ್ಡು ಪಡೆಯಲು ನಾಲ್ಕು ಚಕ್ರ ಹೊಂದಿರಬಾರದು ಎಂಬ ಮಾನದಂಡ ಇತ್ತು.
ಆ ವೇಳೆ ಮೂಡಿಗೆರೆಯಲ್ಲಿ 599 ಬಿಪಿಲ್ ಕಾರ್ಡುಗಳನ್ನು ಎಪಿಎಲ್ ಆಗಿ ಪರಿವರ್ತಿಸಲಾಗಿದೆ. ಅದೇ ಬೇರೆ ಬೇರೆ ಕ್ಷೇತ್ರಗಳಲ್ಲೂ ಆಗಿದೆ. ನಂತರ ಈ ಮಾನದಂಡವನ್ನು ಮತ್ತೆ ತೆಗೆದುಹಾಕಲಾಗಿದೆ. ಹಾಗಾಗಿ ಮುಂದೆ ಈ ಮಾನದಂಡದ ಕಾರಣಕ್ಕೆ ಎಪಿಎಲ್ಗೆ ಪರಿವರ್ತನೆಯಾಗಿರುವ ಕಾರ್ಡುಗ ಳನ್ನು ಬಿಪಿಎಲ್ ಆಗಿ ಪರಿವರ್ತಿಸಲಾಗುವುದು ಎಂದರು.

