ರೆಡ್ಡಿಗಳ ಕಾಳಗದಲ್ಲಿ ಕೈ ಕಾರ್ಯಕರ್ತ ಸಾವು ; ಜನಾರ್ದನ ರೆಡ್ಡಿ, ಶ್ರೀರಾಮಲು ಸೇರಿ 11 ಜನರ ವಿರುದ್ಧ ಪ್ರಕರಣ…!
ಬಳ್ಳಾರಿ : Bellary ಗಾಲಿ ಜನಾರ್ದನ ರೆಡ್ಡಿ ( Janardhan Reddy ) ಮನೆಯ ಬಳಿ ಸಂಭವಿಸಿದ್ದ ಗುಂಡಿನ ದಾಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ.ಶ್ರೀರಾಮಲು (B.Shriramalu ) ಸೇರಿ 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ವಾಲ್ಮೀಕಿ ಕಾರ್ಯಕ್ರಮದ ಅನಾವರಣ ಕಾರ್ಯಕ್ರಮ ಹಿನ್ನಲೆಯಲ್ಲಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಬಳ್ಳಾರಿಯ ಜನಾರ್ದನ ರೆಡ್ಡಿ ಮನೆ ಎದುರಿಗೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಸಂಭವಿಸಿದ ಫೈರಿಂಗ್ ವೇಳೆ ಬಳ್ಳಾರಿ ಶಾಸಕ ನಾರಾ ರೆಡ್ಡಿ ಆಪ್ತ ರಾಜಶೇಖರ (28) ಮೃತಪಟ್ಟಿದ್ದಾನೆ.
ಈ ಘಟನೆ ಹಿನ್ನಲೆಯಲ್ಲಿ ಶಾಸಕ ಬರತ್ ರೆಡ್ಡಿ ಆಪ್ತ ಚಾನಾಳ್ ಶೇಖರ್ ಎಂಬುವವರು ನಗರದ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಶಾಸಕ ಜನಾರ್ದನ ರೆಡ್ಡಿ, ಶ್ರೀರಾಮಲು, ಪಾಲಿಕೆ ಸದಸ್ಯ ವೋಲ್ಕರ್ ಶ್ರೀನಿವಾಸ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬ್ಯಾನರ್ ವಿಚಾರದಲ್ಲಿ ನಡೆದ ಗಲಾಟೆ ವೇಳೆ ಜನಾರ್ದನ ರೆಡ್ಡಿ , ಸೋಮಶೇಖರ್ ರೆಡ್ಡಿ ಹಾಗೂ ಬೆಂಬಲಿಗರು ಜಗಳಕ್ಕೆ ಮುಂದಾಗಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.


