
ಸಾಮಾಜಿಕ ಕಾರ್ಯ ನಿರ್ವಹಿಸುತ್ತಿರುವ ಬದಲಾವಣೆಯ ಬೆಳಕು ಫೌಂಡೇಶನ್ ಕಾರ್ಯ ಶ್ಲಾಘನೀಯ : ದೀಪಾ ಕುಡಚಿ

ಬೆಳಗಾವಿ : ಬದಲಾವಣೆಯ ಬೆಳಕು ಫೌಂಡೇಶನ್ ವತಿಯಿಂದ ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕಾರ ಕಾರ್ಯಕ್ರಮವನ್ನು ಬೆಳಗಾವಿಯಲ್ಲಿ ಆಯೋಜಿಸಲಾಗಿತ್ತು.

ಶುಕ್ರವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬದಲಾವಣೆಯ ಬೆಳಕು ಫೌಂಡೇಶನ್ ವತಿಯಿಂದ ಪದ್ಮಭೂಷಣ ಗಾನಯೋಗಿ ಪಂಡಿತ್ ಪುಟ್ಟರಾಜ್ ಗವಾಯಿಗಳವರ ಪುಣ್ಯಸ್ಮರಣೋತ್ಸವ ನಿಮಿತ್ಯ ಶಿವರಾಜ್ ಮೆಲೋಡಿಸ್ನಿಂದ ಗೀತ ಗಾಯನ ನಮನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸತ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಬಿಜೆಪಿ ಮುಖಂಡೆ ದೀಪಾ ಕುಡಚಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಇವರು. ಇಂದಿನ ದಿನಗಳಲ್ಲಿ ಯುವಕರು ಸಮಾಜಪರ ಚಿಂತನೆಗಳಲ್ಲಿ ಹಾಗೂ ಸಾಮಾಜಿಕ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದು ಸಂತೋಷದ ವಿಷಯ. ನಾವೆಲ್ಲ ತುಳಿತಕ್ಕೆ ಒಳಗಾದವರ ಪರವಾಗಿ ಕೆಲಸ ಮಾಡಬೇಕು. ಸದೃಢ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.

ಅದಮ್ಯ ಫೌಂಡೇಶನ್ ಸಂಸ್ಥಾಪಕ ಹಾಗೂ ಪತ್ರಕರ್ತ ವಿನಾಯಕ ಮಠಪತಿ ಮಾತನಾಡಿ. ಸಮಾಜದ ಒಳಿತಿಗಾಗಿ ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಕೆಲಸ ಮಾಡಬೇಕು. ಇಂದಿನ ದಿನಮಾನದಲ್ಲಿ ಯುವಕರು ಅತ್ಯಂತ ಉತ್ಸಾಹದಿಂದ ಸಮಾಜಪರ ಕೆಲಸ ಮಾಡುತ್ತಿದ್ದು ಸರ್ಕಾರದ ಹೊರತಾದ ಕೆಲಸ ಮಾಡುತ್ತಿರುವುದು ಅತ್ಯಂತ ಖುಷಿ ವಿಷಯ ಎಂದರು.

ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಹಿರಟ್ಟಿ ಮಾತನಾಡಿ ಕಳೆದ ಒಂದು ವರ್ಷದ ಹಿಂದೆ ಬದಲಾವಣೆಯ ಬೆಳಕು ಫೌಂಡೇಶನ್ ಬೆಳಗಾವಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿತ್ತು. ಈಗ ಜನರ ಸಹಕಾರ ನಮಗೆ ಒಳ್ಳೆಯ ರೀತಿ ಸಿಗುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯಾಧ್ಯಂತ ಕೆಲಸ ಮಾಡುತ್ತಿದ್ದೇವೆ. ಇಂದು ನಮ್ಮ ಹೆಮ್ಮೆಯ ಪುಟ್ಟರಾಜ್ ಗವಾಯಿಗಳವರ ಪುಣ್ಯಸ್ಮರಣೋತ್ಸವ ನಿಮಿತ್ಯ ನಮ್ಮ ಉತ್ತರಕರ್ನಾಟಕದ ಎಲ್ಲ ಕಲಾವಿದರು ಸೇರಿಕೊಂಡು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಸುವರ್ಣ ನ್ಯೂಸ್ ವರದಿಗಾರ ಮಹಾಂತೇಶ್ ಕುರುಬೆಟ್ಟ, ಅಂತರರಯಾಮಿ ಫೌಂಡೇಶನ್ ಸಂಸ್ಥಾನದ ನಾಗರಾಜ ಗಸ್ತಿ, ಬಿಜೆಪಿ ಯುವ ಮುಖಂಡ ಸದಾನಂದ ಗುಂಟೆಪ್ಪಣ್ಣವರ ಹಾಗೂ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಯುವ ರಾಜಕೀಯ ಮುಖಂಡರು ಹಾಗೂ ಕಲಾ ಕ್ಷೇತ್ರದಲ್ಲಿ ಸೇವೆ ಮಾಡುತ್ತಿರುವ ಉತ್ಸಾಹಿ ಯುವಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜೂನಿಯನ್ ಅಮಿತಾಬ್ ಬಚ್ಚನ್, ಜೂನಿಯರ್ ವಿಷ್ಣುವರ್ಧನ್, ಜೂನಿಯರ್ ಶಿವರಾಜ್ಕುಮಾರ್, ಜೂನಿಯರ್ ರವಿಚಂದ್ರನ್ ಸೇರಿದಂತೆ ಇನ್ನಿತರ ಕಲಾವಿದರು ತಮ್ಮ ಅಮೋಘ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಈ ಸಂದರ್ಭದಲ್ಲಿ ಸಚಿನ್ ನಾಯಿಕ್, ಡಾ.ಸತೀಶ ಚೌಲಿಗೇರ, ಡಾ.ತುಷಾರ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

