ದೇವಸ್ಥಾನದ ಮೇಲೆ ‘ಕೋಳಿಮರಿ’ ಹಾರಿಸುವ ವಿಶಿಷ್ಟ ಸಂಪ್ರದಾಯ ಎಲ್ಲಿ ಗೊತ್ತಾ…?
ಬೆಳಗಾವಿ : ಸಾಮಾನ್ಯವಾಗಿ ದೇವರಿಗೆ ಹರಕೆ ತೀರಿಸಲು ಹಣ್ಣು, ಉತ್ತತ್ತಿ ಹಾರಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ದೇವಸ್ಥಾನದ ಗರ್ಭಗುಡಿ ಮೇಲೆ ಕೋಳಿ ಮರಿಗಳನ್ನು ಹಾರಿಸುವ ವಿಶಿಷ್ಟ ಪದ್ಧತಿ ಜಾರಿಯಲ್ಲಿದೆ.
ಬೆಳಗಾವಿಯ ವಡಗಾವಿಯಲ್ಲಿರುವ ಮಂಗಾಯಿದೇವಿ ದೇವಸ್ಥಾನದಲ್ಲಿ ಕೋಳಿ ಮರಿ ಹಾರಿಸುವ ವಿಭಿನ್ನ ಸಂಪ್ರದಾಯವಿದೆ. ಈ ಅದ್ಧೂರಿ ಜಾತ್ರೆಗೆ ಸ್ಥಳೀಯರಷ್ಟೇ ಅಲ್ಲದೇ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಬಂದಿದ್ದರು. ಪ್ರತಿ ವರ್ಷವೂ ಆಷಾಢ ಮಾಸದಲ್ಲಿ ಹುಣ್ಣಿಮೆಯ ಬಳಿಕ ಬರುವ ಮಂಗಳವಾರ ದೇವಿಯ ಜಾತ್ರೆ ನೆರವೇರುತ್ತದೆ.
ಕಿಕ್ಕಿರಿದು ಸೇರಿರುವ ಜನ..ಕೋಳಿ ಮರಿಗಳ ಖರೀದಿಯ ಭರಾಟೆ..ಗರ್ಭ ಗುಡಿ ಮೇಲೆ ಭಕ್ತಿಯಿಂದ ಕೋಳಿ ಮರಿಗಳನ್ನು ಹಾರಿಸುತ್ತಿರುವ ಭಕ್ತಾದಿಗಳು..ಹೌದು ನೀವು ನೋಡುತ್ತಿರುವ ಈ ದೃಶ್ಯ ವೈಭವ ಬೆಳಗಾವಿಯ ವಡಗಾವಿ ಆರಾಧ್ಯ ದೇವಿ ಮಂಗಾಯಿದೇವಿ ಜಾತ್ರೆಯಲ್ಲಿ. ಈ ಅದ್ಧೂರಿ ಜಾತ್ರೆಗೆ ಸ್ಥಳೀಯರಷ್ಟೇ ಅಲ್ಲದೇ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಬಂದಿದ್ದರು. ಪ್ರತಿ ವರ್ಷವೂ ಆಷಾಢ ಮಾಸದಲ್ಲಿ ಹುಣ್ಣಿಮೆಯ ಬಳಿಕ ಬರುವ ಮಂಗಳವಾರ ದೇವಿಯ ಜಾತ್ರೆ ನೆರವೇರುತ್ತದೆ. ನಿನ್ನೆ ಜಾತ್ರೆಗೆ ಅದ್ಧೂರಿ ಚಾಲನೆ ಸಿಕ್ಕಿದೆ.
ಮಂಗಳವಾರದಿಂದ ಶುಕ್ರವಾರದವರೆಗೂ ಜಾತ್ರೆಗೆ ಬರುವ ಭಕ್ತರು ಕೋಳಿ ಮರಿಗಳನ್ನು ಖರೀದಿಸಿ ಮಂದಿರದ ಗರ್ಭಗುಡಿಯ ಮೇಲೆ ಹಾರಿಸುವಂತಹ ಪದ್ಧತಿ ಇಲ್ಲಿ ವಾಡಿಕೆಯಲ್ಲಿರುವುದು ಈ ದೇವಸ್ಥಾನದ ವೈಶಿಷ್ಟ್ಯ. ಈ ಮೊದಲು ಈ ದೇವಿಗೆ ಕುರಿ, ಕೋಳಿ ಗಳನ್ನು ಬಲಿ ಕೊಡಲಾಗುತ್ತಿತ್ತು. ಆದರೆ, ಇದರ ನಿಷೇಧದ ಬಳಿಕ ಇದೀಗ ಭಕ್ತರು ಕೋಳಿ ಮರಿಗಳನ್ನು ತಾಯಿಯ ಗರ್ಭಗುಡಿಯ ಮೇಲೆ ಹಾರಿಸಿ ತಮ್ಮ ಹರಕೆಯನ್ನು ಪೂರೈಸುತ್ತಾರೆ.
ಕೋಳಿ ಮರಿ ಖರೀದಿಸುತ್ತಿದ್ದ ಶೃತಿ ರಾಯ್ಕರ್ ಮತ್ತು ಸುರೇಖಾ ರಾಠೋಡ ಈಟಿವಿ ಭಾರತ ಜೊತೆಗೆ ಮಾತನಾಡಿ, ಮಂಗಾಯಿ ದೇವಿಯಲ್ಲಿ ಏನೇ ಬೇಡಿಕೊಂಡರೆ ಖಂಡಿತವಾಗಲೂ ಈಡೇರುತ್ತದೆ. ಈ ದೇವಿ ಬಹಳ ಶಕ್ತಿಶಾಲಿ ಆಗಿದ್ದಾರೆ. ನಾವು ಚಿಕ್ಕಂದಿನಿಂದ ಜಾತ್ರೆಗೆ ಬರುತ್ತೇವೆ. ಈಗ ನಾವು ಕೋಳಿ ಮರಿ ಹಾರಿಸಿ ನಮ್ಮ ಹರಿಕೆ ತೀರಿಸುತ್ತೇವೆ ಎಂದರು.
ವಡಗಾವಿಯ ಪಾಟೀಲ್ ಗಲ್ಲಿಯಲ್ಲಿರುವ ಮಂಗಾಯಿ ದೇವಿ ‘ತವರು ಮನೆಯ ದೇವತೆ’ ಎಂದೇ ಪ್ರಸಿದ್ದಿ ಪಡೆದಿದ್ದಾಳೆ. ಈ ದೇವಿಯ ಜಾತ್ರೆಗೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಸೇರೋದು ವಿಶೇಷತೆ. ಬೆಳಗಾವಿ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಮದುವೆಯಾಗಿ ಹೋದ ಬಹುತೇಕ ಹೆಣ್ಣುಮಕ್ಕಳು ಆಷಾಢ ಮಾಸದಲ್ಲಿ ಮರಳಿ ತಮ್ಮ ತವರೂರು ಜಾತ್ರೆಗೆ ಬರುವುದು ಈ ಜಾತ್ರೆ ವೈಶಿಷ್ಟ್ಯತೆ. ಅದಕ್ಕಾಗಿಯೇ ಈ ಮಂಗಾಯಿ ದೇವತೆಯನ್ನು ತವರು ಮನೆ ದೇವತೆ ಎಂದು ಕರೆಯುವುದುಂಟು.
ಹೀಗೆ ಹರಕೆ ತೀರಿಸುವಾಗ ಎಸೆಯುವ ಬಹುತೇಕ ಕೋಳಿ ಮರಿಗಳು ಸಾವನ್ನಪ್ಪುತ್ತವೆ. ಆದರೆ ಇದ್ಯಾವುದನ್ನು ಲೆಕ್ಕಿಸದ ಭಕ್ತರು ತಮ್ಮ ಪಾಡಿಗೆ ಕೋಳಿ ಮರಿ ಎಸೆದು ಹರಿಕೆ ತೀರಿಸಿದ ಸಂತೃಪ್ತಿಯಲ್ಲಿ ಹೊರಟು ಹೋಗುತ್ತಾರೆ. ಆದರೇ ದೇವಸ್ಥಾನದ ಮೇಲೆ ಎಸದಿರುವ ಕೋಳಿ ಮರಿಗಳನ್ನು ಸಂಗ್ರಹಿಸಿ ದೇವಸ್ಥಾನದವರು ಮತ್ತೆ ಅವುಗಳನ್ನು ಮಾರುತ್ತಾರೆ. ಹೀಗೆ ನಾಲ್ಕು ದಿನಗಳ ಜಾತ್ರೆಯಲ್ಲಿ ಸಾವಿರಾರು ಕೋಳಿ ಮರಿಗಳನ್ನು ಎಸೆಯಲಾಗುತ್ತದೆ.
ಇದರಿಂದ ದೇವಸ್ಥಾನಕ್ಕೆ ಉತ್ತಮ ಆದಾಯ ಜೊತೆಗೆ ವ್ಯಾಪಾರಿಗಳಿಗೂ ಕೈ ತುಂಬ ಸಂಪಾದನೆ ಆಗುತ್ತದೆ. ಜಾತ್ರೆಗೆ ಬಂದಿದ್ದ ವರ್ಷಾ ಮಾತನಾಡಿ, ಇದೇ ಮೊದಲ ವರ್ಷ ನಾನು ಜಾತ್ರೆಗೆ ಬಂದಿದ್ದೇನೆ. ಕೋಳಿ ಮರಿಗಳನ್ನು ನಾವು ರಕ್ಷಣೆ ಮಾಡಬೇಕು. ಅದನ್ನು ಬಿಟ್ಟು ಈ ರೀತಿ ಹಾರಿಸುವುದು ನೋಡಿ ನನಗೆ ಬಹಳ ಬೇಜಾರಾಗುತ್ತಿದೆ. ಸಣ್ಣ ಮರಿಗಳು ಸಾಯುವುದು ನೋಡಲು ಆಗುತ್ತಿಲ್ಲ ಎಂದು ತಮ್ಮ ಬೇಸರ ಹೊರ ಹಾಕಿದರು.


