ಬೆಳಗಾವಿ : ಪಾಲಿಕೆ ಮೇಯರ್ ಸ್ಥಾನ ಅತಂತ್ರ ; ಸದಸ್ಯರ ಅನರ್ಹತೆ ಎತ್ತಿ ಹಿಡಿದ ನಗರಾಭಿವೃದ್ಧಿ ಇಲಾಖೆ
ಬೆಳಗಾವಿ : ನಗರದ ತಿನಿಸು ಕಟ್ಟೆಯ ಮಳಿಗೆಯನ್ನು ರಾಜಕೀಯ ಪ್ರಭಾವ ಬಳಸಿ ತಮ್ಮ ಕುಟುಂಬದವರಿಗೆ ಕೊಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಇಬ್ಬರು ಸದಸ್ಯರ ಅನರ್ಹತೆಯನ್ನು ನಗರಾಭಿವೃದ್ಧಿ ಇಲಾಖೆ ಎತ್ತಿ ಹಿಡಿದಿದೆ.
ಬೆಳಗಾವಿಯ ಹಾಲಿ ಮೇಯರ್ ಮಂಗೇಶ ಪವಾರ ಮತ್ತು ಪಾಲಿಕೆ ಸದಸ್ಯ ಜಯಂತ ಜಾಧವ ಅವರ ಸದಸ್ಯತ್ವವನ್ನು ರದ್ದುಗೊಳಿಸಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಇದರಿಂದ ಮೇಯರ್ ಸ್ಥಾನ ಅತಂತ್ರ ಸ್ಥಿತಿಯಲ್ಲಿದ್ದು ಇದರಿಂದ ಬಿಜೆಪಿಗೆ ಸಾಕಷ್ಟು ಹಿನ್ನಡೆಯಾಗಿದೆ. ಇಬ್ಬರೂ ತಮ್ಮ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದು,
ಪಾಲಿಕೆ ಸದಸ್ಯರಾಗಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಸುಜಿತ್ ಮುಳಗುಂದ ಈ ಹಿಂದೆ ಪ್ರಾದೇಶಿಕ ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಪ್ರಾದೇಶಿಕ ಆಯುಕ್ತರು ಈ ಇಬ್ಬರು ಸದಸ್ಯತ್ವ ರದ್ದುಗೊಳಿಸಿ ಆದೇಶ ಹೊರಡಿಸಿದ್ದರು.
ಸದಸ್ಯತ್ವ ರದ್ದತಿ ಕುರಿತು ಇಬ್ಬರು ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣವನ್ನು ಸರಕಾರದ ಮಟ್ಟದಲ್ಲಿ ಬಗೆಹರಿಸಿಕೊಳ್ಳುವಂತೆ ಕೋರ್ಟ್ ಅರ್ಜಿದಾರರಿಗೆ ನಿರ್ದೇಶನ ನೀಡಿತ್ತು. ಇದರ ಅನ್ವಯ ತನಿಖೆ ನಡೆಸಿದ್ದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್ ಇಬ್ಬರ ಸದಸ್ಯತ್ವ ರದ್ದತಿ ಎತ್ತಿಹಿಡಿದಿದ್ದಾರೆ.


