ಪ್ರಾಣ ಪಣಕ್ಕಿಟ್ಟು ರಾಕ್ ಗಾರ್ಡನ್ ವೀಕ್ಷಿಸಲು ಹೊರಟ ಮಕ್ಕಳು ; ಶಿಕ್ಷಕರ ನಡೆಗೆ ಆಕ್ರೋಶ
ಬೈಲಹೊಂಗಲ: ಟ್ರ್ಯಾಕ್ಟರ್ ಟ್ರೇಲರ್ ಮತ್ತು ಮುಂದಿನ ಎಂಜೀನ್ ಮೇಲೆ ಶಾಲಾ ಮಕ್ಕಳನ್ನು ಕುರಿಗಳ ಹಾಗೆ ತುಂಬಿಕೊಂಡು ಅಪಾಯಕಾರಿ ಪ್ರಯಾಣ ಮಾಡುವ ಮೂಲಕ ಶಾಲಾ ಶಿಕ್ಷಕರು ಮಕ್ಕಳ ಜೀವದ ಜತೆ ಚಲ್ಲಾಟ ಆಡಿದ್ದಾರೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.
ತಾಲ್ಲೂಕಿನ ನಯಾನಗರ ಗ್ರಾಮದ ಸರ್ಕಾರಿ ಕನ್ನಡ ಮಾದರಿ ಶಾಲೆಯ ಬಾಲಕ ಮತ್ತು ಬಾಲಕಿಯರನ್ನು ಐದಾರು ಟ್ರ್ಯಾಕ್ಟರ್ ಮತ್ತು ಟ್ರೇಲರ್ ಗಳಲ್ಲಿ ಕುರಿಯಂತೆ ತುಂಬಿಕೊಂಡು ಹೋಗುತ್ತಿರುವ ದೃಶ್ಯವನ್ನು ಬುಧವಾರ ನೋಡಿದ ಸಾರ್ವಜನಿಕರೇ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ನಯಾನಗರದಿಂದ ಸಂಗೊಳ್ಳಿ ಗ್ರಾಮ ಸುಮಾರು 12 ಕಿ. ಮೀ ಅಂತರದಲ್ಲಿದೆ. ಸಂಗೊಳ್ಳಿ ಬಳಿಯಿರುವ ರಾಕ್ ಗಾರ್ಡನ್ ವೀಕ್ಷಿಸಲು ಕರೆದುಕೊಂಡು ಹೋಗಿದ್ದರು ಎಂದು ಮರಳಿ ಊರಿಗೆ ಮರಳುತ್ತಿದ್ದ ಮಕ್ಕಳು ತಿಳಿಸಿದರು.
ಸಂಗೊಳ್ಳಿ –ನಯಾನಗರ ರಸ್ತೆ ಅಲ್ಲಲ್ಲಿ ಕೆಟ್ಟಿದೆ. ದೊಡ್ಡ ಹೊಂಡಗಳು ರಸ್ತೆಗಳಲ್ಲಿ ಜನ್ಮತಾಳಿವೆ. ಇಂಥ ರಸ್ತೆಯಲ್ಲಿ ಚಿಕ್ಕ ಮಕ್ಕಳನ್ನು ಈ ರೀತಿ ಅಪಾಯಕಾರಿಯಾಗಿ ಪ್ರಯಾಣ ಮಾಡಿಸಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರದಾಗಿದೆ.
ಟ್ರ್ಯಾಕ್ಟರ್ ಸಂಚರಿಸುವ ವೇಳೆ ಧಡಕಿಗೆ ಕುರಿಯಂತೆ ತುಂಬಿದ್ದ ಹಾಗೂ ಚಾಲಕನ ಅಕ್ಕಪಕ್ಕ ಕುಳಿತಿದ್ದ ಮಕ್ಕಳಿಗೆ ಏನಾದರೂ ತೊಂದರೆಯಾಗಿದ್ದರೆ ಅದರ ಹೊಣೆಗೆ ಯಾರು ಜವಾಬ್ದಾರಿ ಆಗುತ್ತಿದ್ದರು. ಟ್ರ್ಯಾಕ್ಟರ್ ನಲ್ಲಿ ಪಯಣಿಸಿ ರಾಕ್ ಗಾರ್ಡನ್ ವೀಕ್ಷಿಸಲು ಬೈಲಹೊಂಗಲ ಬಿಇಓ ಅವರೇನು ಪರವಾನಿಗೆ ನೀಡಿದ್ದರೆ ಎಂಬುದನ್ನು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೇ ತಿಳಿಸಬೇಕಿದೆ.


