
ಬೂದಿ ಮುಚ್ಚಿದ ಕೆಂಡವಾದ ಅಥಣಿ ಕಾಂಗ್ರೆಸ್ : ಕೈ ನಾಯಕರ ವಿರುದ್ಧ ಸ್ಥಳೀಯ ನಾಯಕರ ಅಸಮಾಧಾನ

ಬೆಳಗಾವಿ : ಬಿಜೆಪಿ ರಾಜೀನಾಮೆ ನೀಡಿ ಕಾಂಗ್ರೆಸ್ ಗೆ ಲಕ್ಷ್ಮಣ ಸವದಿ ಸೇರ್ಪಡೆ ಆದ ಬೆನ್ನಲ್ಲೇ ಸಧ್ಯ ಅಥಣಿ ಕಾಂಗ್ರೆಸ್ ವಲಯ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಹೌದು ಕಳೆದ ಒಂದು ವರ್ಷದಿಂದ ಪಕ್ಷದ ಟಿಕೆಟ್ ಪಡೆಯಲು ನಿರಂತರ ಹೋರಾಟ ಮಾಡಿದ್ದ ಸ್ಥಳೀಯ ಮುಖಂಡರನ್ನು ಕಡೆಗಣಿಸಿ ಕಾಂಗ್ರೆಸ್ ಹೈಕಮಾಂಡ್ ಲಕ್ಷಣ ಸವದಿ ಸೇರ್ಪಡೆ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
ಲಕ್ಷ್ಮಣ ಸವದಿ ಸೇರ್ಪಡೆ ಕುರಿತು ಸ್ಥಳೀಯ ಟಿಕೆಟ್ ಆಕಾಂಕ್ಷಿಗಳಿಗೆ ಯಾವುದೇ ಸಂದೇಶ ಹಾಗೂ ಅಸಮಾಧಾನಕ್ಕೆ ಪೋನ್ ಕರೆ ಮಾಡದಿರುವುದು ಮುಖಂಡನ್ನು ರೊಚ್ಚಿಗೆಬ್ಬಿಸಿದೆ. ಕಳೆದ ಹಲವು ವರ್ಷಗಳಿಂದ ಸವದಿ ವಿರುದ್ಧ ಹೋರಾಟ ಮಾಡಿದ್ದ ನಾಯಕರಿಗೆ ಪಕ್ಷ ಟಿಕೆಟ್ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
ಹತ್ತಕ್ಕೂ ಅಧಿಕ ಅಭ್ಯರ್ಥಿಗಳ ನಡೆ ನಿಗೂಢ : ಬಿಜೆಪಿ ತೊರೆದು ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಲಕ್ಷಣ ಸವದಿ ಯಶಸ್ವಿಯಾದರೆ ಅತ್ತ ಅಥಣಿಯ ಸ್ಥಳೀಯ ಮುಖಂಡರ ಕಡೆಗಣನೆ ಮತ್ತೊಂದು ಕಡೆ ಆಕ್ರೋಶಕ್ಕೂ ಕಾರಣವಾಗಿದೆ. ಪ್ರಮುಖ ಟಿಕೆಟ್ ಆಕಾಂಕ್ಷಿಗಳಾಗಿದ್ದ ಪಂಚಮಸಾಲಿ ಮುಖಂಡ ದರೆಪ್ಪ ಟಕ್ಕಣ್ಣವರ, ಮುಖಂಡ ಗಜಾನನ ಮಂಗಸೂಳಿ, ಸದಾಶಿವ ಬುಟಾಳಿ, ಸತ್ಯೆಪ್ಪ ಬಾಗೆನ್ನವರ ಸೇರಿದಂತೆ ಅನೇಕ ಮುಖಂಡರಲ್ಲಿ ಅಸಮಾಧಾನ ಮನೆ ಮಾಡಿದ್ದು ಯಾವುದೇ ಸಂದರ್ಭದಲ್ಲಿ ಸ್ಟೂಟವಾಗುವ ಸಾಧ್ಯತೆ ಇದೆ.
ಕಳೆದ ಉಪ ಚುನಾವಣೆಯಲ್ಲಿ ಮಹೇಶ್ ಕುಮಠಳ್ಳಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗಜಾನನ ಮಂಗಸೂಳಿ ಈ ಬಾರಿ ಟಿಕೆಟ್ ನಿರೀಕ್ಷೆಯಲ್ಲಿ ಇದ್ದರು. ಇನ್ನೂ ಪಂಚಮಸಾಲಿ ಮುಖಂಡ ದರೆಪ್ಪ ಟಕ್ಕಣ್ಣವರ ಕಳೆದ ಕೋವಿಡ್ ಸಂದರ್ಭದಿಂದ ಜನಪರ ಕೆಲಸ ಮಾಡಿ ಹಲವರ ಪ್ರೀತಿ ಗಳಿಸಿದ್ದರು. ಆದರೆ ಪಕ್ಷ ಏಕಾಏಕಿ ಹೊರಗಿನವರಿಗೆ ಟಿಕೆಟ್ ನೀಡಿದ್ದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಪಕ್ಷೇತರ ಅಭ್ಯರ್ಥಿ ಕಣಕ್ಕೆ ಸಾಧ್ಯತೆ : ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದ ಕೈ ಮುಖಂಡರಿಗೆ ಟಿಕೆಟ್ ತಪ್ಪಿದ್ದು ಹಲವರ ಅಸಮಾಧಾನಕ್ಕೂ ಕಾರಣವಾಗಿದೆ. ನಾಳೆ ಕೆಲ ಮುಖಂಡರು ತಮ್ಮ ಕಾರ್ಯಕರ್ತರ ಸಭೆ ಕರೆದಿದ್ದು ಮುಂದಿನ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಪಕ್ಷದ ನಡೆ ಖಂಡಿಸಿ ಬಂಡಾಯ ಏಳುವ ಸಾಧ್ಯತೆ ದಟ್ಟವಾಗಿದೆ.