ನನ್ನ ತಾಯಿ ಎದೆ ಹಾಲು ಕುಡಿಸಿ ಬೆಳೆಸಿದ್ದಾಳೆ ; ಮತ್ತೊಮ್ಮೆ ಗುಡುಗಿದ ಸಂಸದ ಹೆಗಡೆ
ಚನ್ನಮ್ಮನ ಕಿತ್ತೂರು : ನನ್ನ ತಾಯಿ ನನಗೆ ಎದೆ ಹಾಲು ಕುಡಿಸಿ ಬೆಳಿಸಿದ್ದಾಳೆ, ಬಾಟಲಿ ಹಾಲು ಕುಡಿಸಿಲ್ಲ. ನನ್ನ ರಕ್ತದ ಬಗ್ಗೆ ನನಗೆ ಗೌರವವಿದೆ. ಅವರು ಮೈಸೂರಿನ ಗರಡಿಯಲ್ಲಿ ಬೆಳೆದಿದ್ದರೆ ನಾನು ಅದೇ ಗರಡಿಯಲ್ಲಿ ಕುಸ್ತಿ ಆಡಿ ಬೆಳೆದು ಬಂದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಸಂಸದ ಅನಂತಕುಮಾರ್ ಹೆಗಡೆ ಪರೋಕ್ಷವಾಗಿ ಟಾಂಗ್ ನೀಡಿದರು.
ಕಿತ್ತೂರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಯುದ್ಧಭೂಮಿಯಲ್ಲಿ ಭರತನಾಟ್ಯ, ಶಾಸ್ತ್ರೀಯ ಸಂಗೀತಕ್ಕೆ ಅವಕಾಶವಿಲ್ಲ. ಅಲ್ಲಿ ಯಾವ ಭಾಷೆಯಲ್ಲಿ ಮಾತನಾಡಬೇಕು ಅದೇ ಭಾಷೆಯಲ್ಲಿ ಮಾತನಾಡಿರುವೆ. ಕ್ಷೇತ್ರದಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಆದರೆ ಇತಿಹಾಸ ನಿರ್ಮಿಸುವುದು ನಾವೇ ಆಗಿದ್ದೇವೆ. ಕ್ಷೇತ್ರದ ಜನರ ಬೆಂಬಲ ಬೆನ್ನ ಹಿಂದೆ ಇರುವಾಗ ಹೊಂದಾಣಿಕೆ ಮಾಡಿಕೊಂಡು ಮಾತು ಬದಲಿಸುವ ವ್ಯಕ್ತಿ ನಾನಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.
ನಾನು ಮತ್ತೊಮ್ಮೆ ಜನರನ್ನು ನೋಡಲು ಸಾಧ್ಯವಿಲ್ಲ ಎಂದುಕೊಂಡಿದ್ದೆ. ಕಳೆದ ವರ್ಷ ಸಿಂಗಪುರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಒಡೆಯುತ್ತಿದೆ. ನನ್ನ ನೋಡಲು ಬಂದವರಿಗೆ ಚುನಾವಣೆ ವಿಷಯ ಬಿಟ್ಟು ಬೇರೆ ಮಾತಾಡಿ ಎಂದು ಹೇಳಿದ್ದುಂಟು ಆದರೆ ಇಷ್ಟೊಂದು ಪ್ರೀತಿ ಇರುವ ಜನರಿಂದ ದೂರವಾಗುವ ಬೇಸರ ಯಾವತ್ತೂ ಕಾಡುತಿತ್ತು ಎಂದು ಸಂಸದ ಅನಂತಕುಮಾರ್ ಹೆಗಡೆ ಭಾವನಾತ್ಮಕವಾಗಿ ಮಾತನಾಡಿದರು.
ನಾನು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬೇರೆಯವರಿಗೆ ಅವಕಾಶ ಕೊಡುವಂತೆ ಹೇಳಿದ್ದೆ. ಅನಾರೋಗ್ಯದ ಹಿನ್ನಲೆಯಲ್ಲಿ ಸಾರ್ವಜನಿಕರ ಭೇಟಿ ಸಾಧ್ಯವಾಗಿರಲಿಲ್ಲ. ಈ ಬಾರಿ ಚುನಾವಣೆಯಲ್ಲಿ ಪಕ್ಷ ಯಾರಿಗೆ ಅವಕಾಶ ನೀಡಲಿ ಆದರೆ ಮೂರನೇ ಭಾರಿಗೆ ಮೋದಿ ಪ್ರಧಾನಿ ಆಗಬೇಕು ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಬಿಜೆಪಿ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸುಭಾಷ ಪಾಟೀಲ, ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ, ಸಂದೀಪ್ ದೇಶಪಾಂಡೆ, ಜಗದೀಶ ವಸ್ತ್ರದ, ಚನ್ನಬಸಪ್ಪ ಮೋಕಾಶಿ, ಶ್ರೀಕರ ಕುಲಕರ್ಣಿ, ವಿಶ್ವನಾಥ ಬಿಕ್ಕಣ್ಣವರ, ನಿಜಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


