ರೈತರಿಗೆ ಕರೆಂಟ್ ಬರೆ ; ಸಂಕಷ್ಟದಲ್ಲಿ ಕಬ್ಬು ಬೆಳೆಗಾರರು
ಅಥಣಿ : ಕೃಷ್ಣಾ ನದಿ ಪಾತ್ರದಲ್ಲಿ ಸಧ್ಯ ರೈತರು ಸಂಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿನಿಂದ ಕಬ್ಬು ಬೆಳೆ ರಕ್ಷಿಸುವ ಅವಸರದಲ್ಲಿದ್ದ ರೈತರಿಗೆ ಈಗ ಕೇವಲ ಒಂದು ಗಂಟೆ ವಿದ್ಯುತ್ ನೀಡುವ ಮೂಲಕ ಜಿಲ್ಲಾಡಳಿತ ಮತ್ತೊಂದು ಬರೆ ನೀಡಿದೆ.
ಹೌದು ಕಳೆದ ನಾಲ್ಕು ದಿನಗಳಿಂದ ಕೃಷ್ಣಾ ನದಿ ಪಾತ್ರದಲ್ಲಿ ಕೇವಲ ಒಂದು ಗಂಟೆ ಮಾತ್ರ ವಿದ್ಯುತ್ ನೀಡಲಾಗುತ್ತಿದೆ. ಮುಂದೆ ಕುಡಿಯುವ ನೀರಿನ ಸಮಸ್ಯೆ ಕಾರಣ ನೀಡಿ ಸಧ್ಯ ವಿದ್ಯುತ್ ಕಡಿತ ಮಾಡಿರುವುದಕ್ಕೆ ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಈಗಾಗಲೇ ಹಣ ಕರ್ಚು ಮಾಡಿ ಬೆಳೆದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಸಧ್ಯ ನದಿಯಲ್ಲಿ ನೀರಿದ್ದರು ಕೇವಲ ಒಂದು ಗಂಟೆ ವಿದ್ಯುತ್ ಕೊಡಲಾಗುತ್ತಿದ್ದು ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಯಲ್ಲಿ ನೀರು ಕಡಿಮೆಯಾದರು ಮಹಾರಾಷ್ಟ್ರದಿಂದ ನೀರು ಬಿಡುವ ಪ್ರಯತ್ನ ಮಾಡುವುದನ್ನು ಬಿಟ್ಟು ಜಿಲ್ಲಾಡಳಿತ ಕರೆಂಟ್ ಕಟ್ ಮಾಡುತ್ತಿರುವುದು ರೈತರನ್ನು ಕಂಗೆಡಿಸಿದೆ.
ಈಗಾಗಲೇ ಬೇಸಿಗೆ ಬಿಸಿಲು ದಿನ ಕಳೆದಂತೆ ಹೆಚ್ಚಾಗುತ್ತಿದೆ. ಈ ನಡುವೆ ಸರ್ಕಾರ ಮಾತ್ರ ಚುನಾವಣೆಯಲ್ಲಿ ಬ್ಯೂಸಿ ಆಗಿದೆ. ಇನ್ನೂ ಜಿಲ್ಲಾಡಳಿತ ಮಾತ್ರ ಮಹಾರಾಷ್ಟ್ರಕ್ಕೆ ನೀರು ಬಿಡುವಂತೆ ಮನವಿ ಮಾಡುವ ಬದಲು ಇಲ್ಲಿ ರೈತರಿಗೆ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಇದರಿಂದ ಕೃಷ್ಣಾ ನದಿ ಪಾತ್ರದ. ಅಥಣಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ, ನಿಪ್ಪಾಣಿ, ಕುಡಚಿ, ಕಾಗವಾಡ ಸೇರಿದಂತೆ ನೂರಾರು ಹಳ್ಳಿಗಳ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.


