ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ; ತುಂಬಿ ಹರಿಯುತ್ತಿರುವ ನದಿಗಳು
ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯ ಪ್ರಮಾಣ ಹೆಚ್ಚಿದ್ದರಿಂದ ಕಲ್ಲೋಳ ಗ್ರಾಮದ ಕೃಷ್ಣಾ ನದಿಗೆ 1,08,723 ಕ್ಯೂಸೆಕನಷ್ಟು ನೀರು ಹರಿದು ಬರುತ್ತಿದೆ.ಇದು ನದಿತೀರದಲ್ಲಿ ಪ್ರವಾಹದ ಭೀತಿ ಸೃಷ್ಟಿಸಿದೆ.
ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜನಿಂದ 84,083 ಕ್ಯೂಸೆಕನಷ್ಟು ಕರ್ನಾಟಕದ ಕೃಷ್ಣಾ, ದೂಧಗಂಗಾ, ವೇದಗಂಗಾ ಹರಿದು ಬರುತ್ತಿದೆ. ಒಟ್ಟು ಕಲ್ಲೋಳ ಬ್ಯಾರೇಜ್ ನ ಕೃಷ್ಣಾನದಿಗೆ 1,08,723 ಕ್ಯೂಸೆಕನಷ್ಟು ನೀರು ಹರಿದು ಬರುತ್ತಿದೆ.
ಕೃಷ್ಣಾ ನದಿ ಸೇರಿದಂತೆ ಉಪ ನದಿಗಳ ನೀರಿನ ಮಟ್ಟ ಸರಾಸರಿ 4 ಅಡಿಯಷ್ಟು ಏರಿಕೆಯಾಗಿದೆ.ಕ್ಷಣ ಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿದೆ.ನದಿತೀರದ ಜನರಲ್ಲಿ ಪ್ರವಾಹ ಭೀತಿ ಆವರಿಸಿದೆ.
ಇಂದು ಮತ್ತೆ ಎರಡು ಬ್ಯಾರೇಜ್ಗಳು ಜಲಾವೃತಗೊಂಡಿವೆ. ಚಿಕ್ಕೋಡಿ-ನಿಪ್ಪಾಣಿ ತಾಲೂಕಿನ ಎಲ್ಲಾ 8 ಬ್ಯಾರೇಜ್ಗಳು ಜಲಾವೃತಗೊಂಡಿವೆ. ಇಂದು ವೇದಗಂಗಾ ನದಿಯ ಜತ್ರಾಟ-ಭಿವಸಿ, ಅಕ್ಕೋಳ-ಸಿದ್ನಾಳ ಬ್ಯಾರೇಜ್ ಗಳು ಜಲಾವೃತಗೊಂಡಿವೆ.
ವೇದಗಂಗಾ ನದಿಯ ಬಾರವಾಡ-ಕುನ್ನೂರ, ಭೋಜ-ಶಿವಾಪುರವಾಡಿ, ದೂಧಗಂಗಾ ನದಿಯ ಕಾರದಗಾ-ಭೋಜ, ಮಲಿಕವಾಡ-ದತ್ತವಾಡ, ಕೃಷ್ಣಾ ನದಿಯ ಕಲ್ಲೋಳ-ಯಡೂರ ಮತ್ತು ಮಾಂಜರಿ-ಸವದತ್ತಿ ಬ್ಯಾರೇಜ್ ಗಳು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.


