ಅತೃಪ್ತರ ಸಭೆಯಲ್ಲಿ ಗಂಭೀರ ಚರ್ಚೆ ; ಬಂಡಾಯವಾ ಅಥವಾ ಬೆದರಿಕೆ ತಂತ್ರವಾ…?
ಬೆಳಗಾವಿ : ಬಿಜೆಪಿಯ ಅತೃಪ್ತ ನಾಯಕರು ಬೆಳಗಾವಿಯಲ್ಲಿ ಸಭೆ ನಡೆಸುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆಯುವ ಪ್ರಯತ್ನ ನಡೆಸಿದ್ದಾರೆ. ಜೊತೆಗೆ ಹೈಕಮಾಂಡ್ ನಾಯಕರಿಗೆ ಸ್ಪಷ್ಟ ಸಂದೇಶ ನೀಡುವ ನಿಟ್ಟಿನಲ್ಲಿ ಈ ಸಭೆ ಆಯೋಜನೆ ಮಾಡಲಾಯ್ತಾ ಎಂಬ ಮಾತು ಜೋರಾಗಿದೆ.
ಹೌದು ವಿಜಯೇಂದ್ರ ನಾಯಕತ್ವ ವಿರುದ್ಧ ಬಹಿರಂಗ ಸಮರ ಸಾರಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಮೇಶ್ ಜಾರಕಿಹೊಳಿ ಸಧ್ಯ ಅತೃಪ್ತ ನಾಯಕರನ್ನು ಒಂದುಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಖಾಸಗಿ ಹೊಟೇಲ್ ಒಂದರಲ್ಲಿ ಸಭೆ ನಡೆಸಿದ್ದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿವೆ.
ವಿಜಯೇಂದ್ರ ಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದೇ ತಡ ಹೈಕಮಾಂಡ್ ವಿರುದ್ಧ ಬಿಜೆಪಿಯ ಕೆಲ ನಾಯಕರು ಮುನಿಸಿಕೊಂಡಿದ್ದರು. ಈ ಬೆನ್ನಲ್ಲೇ ಬೆಳಗಾವಿಯಲ್ಲಿ ಸಭೆ ನಡೆಸುವ ಮೂಲಕ ಮತ್ತೊಮ್ಮೆ ಬಂಡಾಯದ ಬಾವುಟ ಹಾರಿಸಲು ಅತೃಪ್ತ ನಾಯಕರು ಒಂದುಗೂಡಿದ್ದಾರೆ.
ರಹಸ್ಯ ಸಭೆಯಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಜಿ.ಎಮ್ ಸಿದ್ದೇಶ್ವರ, ಅಣ್ಣಾಸಾಹೇಬ್ ಜೊಲ್ಲೆ ಸೇರಿದಂತೆ ಒಟ್ಟು 12 ಜನರು ಸಭೆಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಮುಡಾ ಹಗರಣದ ವಿರುದ್ಧ ವಿಜಯೇಂದ್ರ ಪಾದಯಾತ್ರೆ ಯಶಸ್ವಿಯಾಗಿದ್ದೇ ತಡ ಇತ್ತ ಅತೃಪ್ತ ನಾಯಕರ ಸಭೆ ನಡೆಸಿದ್ದು ಮಹತ್ವ ಪಡೆದುಕೊಂಡಿದೆ.
ಬೆಳಗಾವಿಯಲ್ಲಿ ಹುಟ್ಟಿಕೊಂಡ ಬಂಡಾಯದಿಂದ ಸರ್ಕಾರಗಳೇ ಉರಿಳಿವೆ. ಸಧ್ಯ ಮತ್ತೊಮ್ಮೆ ಬಿಜೆಪಿ ಒಳ ಜಗಳ ಪ್ರಾರಂಭವಾಗಿದ್ದು, ಮುಂದೆ ಯಾವ ದಾರಿ ಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕು.


