
ವಿಟಿಯು ಘಟಿಕೋತ್ಸವ ; ಜಗತ್ತಿಗೆ ಸಾಮರಸ್ಯ ಪ್ರೇರೆಪಿಸಿದ್ದು ನಮ್ಮ ಸಂಸ್ಕೃತಿ – ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ಬೆಳಗಾವಿ : ಪ್ರಾಚೀನ ಕಾಲದಲ್ಲಿ ನಮ್ಮ ಭಾರತ ದೇಶವನ್ನು ವಿಶ್ವ ಗುರು ಎಂದು ಕರೆಯಲಾಗುತ್ತಿತ್ತು. ನಳಂದ, ತಕ್ಷಶಿಲಾ ಮತ್ತು ವಿಕ್ರಮಶಿಲಾ ಮುಂತಾದ ವಿಶ್ವದರ್ಜೆಯ ಶಿಕ್ಷಣ ಸಂಸ್ಥೆಗಳಿದ್ದವು. ನಮ್ಮ ಸಂಸ್ಕೃತಿಯು ಯಾವಾಗಲೂ ವಿಶ್ವ ಭ್ರಾತೃತ್ವ ಮತ್ತು ವಿಶ್ವ ಶಾಂತಿಗೆ ಸಮರ್ಪಿತವಾಗಿದೆ. ಸಮಾನತೆ ಮತ್ತು ಸಾಮರಸ್ಯವನ್ನು ಪ್ರೇರೇಪಿಸುತ್ತದೆ ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಜ್ಞಾನಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಗುರುವಾರ ನಡೆದ ವಿಟಿಯು 24ನೇ ಘಟಿಕೋತ್ಸವ ಭಾಗ -1 ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದ ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ನುರಿತ ಮಾನವ ಸಂಪನ್ಮೂಲವನ್ನು ಸೃಷ್ಟಿಸುವ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸುವ ಹಾಗೂ ಜನರ ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ತಾಂತ್ರಿಕ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತಿದೆ ಎಂದರು.
ಬೆಂಗಳೂರು ಭಾರತೀಯ ವಿಜ್ಣಾನ ಮಂದಿರ (ಐ.ಐ.ಎಸ್ಸಿ) ನಿರ್ದೆಶಕರಾದ ಪ್ರೋ.ಗೋವಿಂದನ್ ರಂಗರಾಜನ್ ಮಾತನಾಡಿ. ಆರ್ಟಿಫಿಷಿಯಲ್ ಇಂಟ್ಲಿಜನ್ಸಿ ಬರುವ ದಿನಗಳಲ್ಲಿ ಕ್ರಾಂತಿ ಮಾಡಲಿದೆ. ವಿದ್ಯಾರ್ಥಿಗಳು ಶಿಕ್ಷಣ ಮುಗಿದ ನಂತರ ಹೇಗೆ ಸಾಮಾಜಿಕ ಜೀವನದಲ್ಲಿ ತೊಡಗಿಕೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಬೇಕು. ತಾಂತ್ರಿಕ ಕಾಲೇಜಿನ ಎಲ್ಲ ವಿಭಾಗಗಳ ವಿದ್ಯಾರ್ಥಿಗಳು ತಂತ್ರಜ್ಞಾನ ಬೆಳವಣಿಗೆಯ ಪ್ರಯೋಜನ ಪಡೆದುಕೊಳ್ಳಬೇಕು. ಭವಿಷ್ಯದಲ್ಲಿ ಎಐ ನಿಂದ ಸಾಕಷ್ಟು ಬದಲಾವಣೆ ಆಗಲಿದೆ ಎಂದರು.
ಬೆಂಗಳೂರು ಇಂಟರನ್ಯಾಷನಲ್ ಏರ್ ಪೋರ್ಟ್ ಲೀ. (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಹರಿ ಕೆ. ಮರಾರ್ ಮಾತನಾಡಿ.
ವಿಶ್ವದಲ್ಲೇ ಭಾರತ ಉನ್ನತ ಸ್ಥಾನಕ್ಕೆ ಬರಲು ಇಂದಿನ ಪೀಳಿಗೆಯ ಪಾತ್ರ ಬಹಳಷ್ಟಿದೆ. ಯುವಕರು ತಮ್ಮ ಸಾಧನೆ ಮೂಲಕ ದೇಶದ ಹೆಸರನ್ನು ವಿಶ್ವದ ಮೂಲೆ ಮೂಲೆಗಳಲ್ಲಿ ಪಸರಿಸುವ ಕಾರ್ಯಕ್ಕೆ ಮುಂದಾಗಬೇಕು. ನಿಮ್ಮ ಜ್ಞಾನವನ್ನು ಶಿಕ್ಷಣದಲ್ಲಿ ಹೂಡಿಕೆ ಮಾಡಿ, ಎಲ್ಲ ಕ್ಷೇತ್ರಗಳಲ್ಲಿಯೂ ನಿರಂತರ ಸಂಪರ್ಕ ಹೊಂದಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಜೀವನದಲ್ಲಿ ಉತ್ತಮ ಹವ್ಯಾಸಗಳನ್ನು ಬೆಳಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್, ಕುಲಸಚಿವರಾದ ಬಿ.ಇ ರಂಗಸ್ವಾಮಿ, ಮೌಲ್ಯ ಮಾಪನ ಕುಲಸಚಿವರಾದ ಟಿ.ಎನ್ ಶ್ರೀನಿವಾಸ ಉಪಸ್ಥಿತರಿದ್ದರು. ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದರು.
ಕಲಿಕೆ ನಿರಂತರ : ಶ್ರೀ ಮಧುಸೂದನ ಸಾಯಿ
ಚಿಕ್ಕಬಳ್ಳಾಪುರ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ ಈ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದು ಹೆಮ್ಮಯ ವಿಷಯವಾಗಿದೆ. ಸಮಾಜದಲ್ಲಿ ನಾವು ತರುವ ಉನ್ನತ ಬದಲಾವಣೆಗಳು ಮುಂದಿನ ಪೀಳಿಗೆಗೆ ದಾರಿ ಮಾಡಿ ಕೊಡುತ್ತವೆ. ಸರ್ಕಾರ, ಸಮಾಜ, ಸಂಸ್ಥೆಗಳು ದೇಶದ ಆಧಾರ ಸ್ಥಂಬವಾಗಿವೆ.
ನಿರಂತರ ಕಲಿಕೆ, ಅಧ್ಯಯನಗಳ ಮೂಲಕ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದು ತಿಳಿಸಿದರು.
ಚಿನ್ನದ ಪದಕ ವಿಜೇತರಿಗೆ ರಾಜ್ಯಪಾಲರಿಂದ ಸನ್ಮಾನ
ಬೆಳಗಾವಿಯ ಕೆ.ಎಲ್.ಇ. ಡಾ. ಎಂ.ಎಸ್ ಶೇಷಗಿರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಾಜಿ ಕಾಲೇಜಿನ ವಿಧ್ಯಾರ್ಥಿ ಸಾಹಿಲ್ ಎಂ. ಸೋಮನಾಚೆ 12 ಚಿನ್ನದ ಪದಕ, ಬೆಂಗಳೂರಿನ ಜಿ.ವಿಷ್ಣು ಪ್ರಿಯಾ – 10, ರೇಷ್ಮಾ ಜಿ – 7, ಮೋಹನಕುಮಾರ ಎಲ್ – 7, ಬಳ್ಳಾರಿಯ ಹೃತಿಕಾ ಜಿ – 7, ಬೆಂಗಳೂರಿನ ಕೃತಿಕಾ ಸೆಂಥಿಲ್ – 4, ಅನುಶ್ರೀ ಪಿ – 4, ಕೆ.ಜಿ.ಎಫ್. ಮಾಲತೇಶ ಎನ್ – 2, ದಾವಣೆಗೆರೆ ಜನನಿ ಡಿ ಅವರಿಗೆ 2 ಹಾಗೂ ಮಂಗಳೂರಿನ ಸೌರವ ವಿ.ಇಂಗಲ್ ಅವರಿಗೆ 2 ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.