ಬೆಳಗಾವಿ : ಶಿವಂ ಅಸೋಸಿಯೇಟ್ ಕಂಪನಿಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಬಂಧಿತರಾಗಿದ್ದ ಶಿವಾನಂದ ನೀಲಣ್ಣವರ್ ಅವರಿಗೆ ಬೆಂಗಳೂರಿನ 92ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ‌ಸೋಮವಾರ ರಾತ್ರಿ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದೆ.

ಮೇ 15ರಂದು ಮಾಳಮಾರುತಿ ಪೊಲೀಸರು ಶಿವಾನಂದ ನೀಲಣ್ಣವರ್ ಅವರನ್ನು ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ಜೂನ್ 12ರಂದು ನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ಹಿಂಡಲಗಾ ಜೈಲಿನಿಂದ ಅವರು ಬಿಡುಗಡೆಯಾದರು.

ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಾನಂದ ನೀಲಣ್ಣವರ್, “ಓಂ ನಮಃ ಶಿವಾಯ… ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಬಯಸುವ ವ್ಯಕ್ತಿ ನಾನು. ಬೇರೆ ಏನು ಹೇಳುವುದಿಲ್ಲ” ಎಂದು ಪ್ರತಿಕ್ರಿಯಿಸಿದರು.

ನ್ಯಾಯಾಲಯ ಜಾಮೀನಿಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ಜೂನ್ 27ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿದೆ. ಅಲ್ಲದೆ ಮೂರು ಲಕ್ಷ ರೂಪಾಯಿ ಬಾಂಡ್ ಶ್ಯೂರಿಟಿ, ಓರ್ವ ಜಾಮೀನುದಾರರನ್ನು ಒದಗಿಸುವುದು, ತನಿಖಾಧಿಕಾರಿಗೆ ಸಹಕರಿಸುವುದು ಹಾಗೂ ದೇಶ ತೊರೆಯಬಾರದು ಎಂಬ ಷರತ್ತುಗಳನ್ನು ವಿಧಿಸಿ ಮಧ್ಯಂತರ ಜಾಮೀನು ನೀಡಲಾಗಿದೆ.