ಉದ್ಯಮಿ ಅಪಹರಣ ಆರೋಪಿ ನಾಮನಿರ್ದೇಶನಕ್ಕೆ ಸೂಚಿಸಿದ್ದರಾ ಸಚಿವರು…? ಪತ್ರ ವೈರಲ್…!
ಬೆಳಗಾವಿ : ಉದ್ಯಮಿ ಅಪಹರಣ ಪ್ರಕರಣದಲ್ಲಿ ಪೊಲೀಸ್ ಬಲೆಗೆ ಬಿದ್ದಿರುವ ಆರೋಪಿ ಮಂಜುಳಾ ರಾಮಗಾನಟ್ಟಿ ಅವಾಂತರಗಳು ಒಂದೊಂದಾಗಿ ಬಯಲಿಗೆ ಬರುತ್ತಿವೆ.
ಗೋಕಾಕ್ ತಾಲೂಕಿನ ಆರೋಗ್ಯ ರಕ್ಷಾ ಸಮಿತಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಮಂಜುಳಾ ಪರಶುರಾಮ ರಾಮಗಾನಟ್ಟಿ ಸೇರಿ 8 ಜನರ ತಂಡವನ್ನು ನಾಮನಿರ್ದೇಶನ ಮಾಡುವಂತೆ ಕೋರಿ ನೀಡಿರುವ ಪತ್ರ ಸಧ್ಯ ವೈರಲ್ ಆಗುತ್ತಿದೆ.
ಗೋಕಾಕ್ ತಾಲೂಕಿನ ಕೊಣ್ಣೂರು ಪಟ್ಟಣದ ಮಂಜುಳಾ ರಾಮನಗಟ್ಟಿ ಬಂಧಿತ ಆರೋಪಿ. ಫೆ. 18 ರಂದು ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದ ರಿಯಲ್ ಎಸ್ಟೇಟ್ ಉದ್ಯಮಿ ಬಸವರಾಜ ಅಂಬಿ ಎಂಬಾತನನ್ನು ಅಪಹರಿಸಿ ನಿಪ್ಪಾಣಿ ಹೊರವಲಯದಲ್ಲಿ ಕೂಡಿಟ್ಟು ಐದು ಕೋಟಿ ಹಣಕ್ಕೆ ಭೇಡಿಕೆ ಇಟ್ಟ ಇಡೀ ಪ್ರಕರಣದ ಪ್ರಮುಖ ಆರೋಪಿ ಇದೇ ಮಂಜುಳಾ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಪ್ತ ಬಳಗದಲ್ಲಿ ಗುರುತಿಸಿಕೊಂಡಂತೆ ನಟನೆ ಮಾಡುತ್ತಿದ್ದ ಈಕೆ ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಹಾಕಿಕೊಂಡು ಅಮಾಯಕರನ್ನು ವಂಚಿಸುವ ಕೆಲಸ ಮಾಡುತ್ತಿದ್ದಳು. ಸಧ್ಯ ಉದ್ಯಮಿ ಅಪಹರಣ ಪ್ರಕರಣದಲ್ಲಿ ಸಿಲುಕಿ ಪೊಲೀಸರ ಅತಿಥಿಯಾಗಿದ್ದಾಳೆ.

ಪ್ರಕರಣದ ಕುರಿತು ಸೋಮವಾರ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೆದ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಕಳೆದ ಫೆ.18 ರಂದು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಪ್ರಜರಣಕ್ಕೆ ಸಂಬಂಧಿಸಿದ ಕೇವಲ 24 ಗಂಟೆಯಲ್ಲಿ ನಾಲ್ವರು ಆರೋಪಿಗಳ ಜೊತೆ ಅಪಹರಣಕ್ಕೆ ಒಳಗಾದ ಉದ್ಯಮಿ ಬಸವರಾಜ ಅಂಬಿ ಯನ್ನು ರಕ್ಷಿಸಲಾಗಿತ್ತು. ಬಂದಿತರು ಆರೋಪಿ ಗಳು ಇಡೀ ಪ್ರಕರಣದ ರೂವಾರಿ ಮಂಜುಳಾ ರಾಮನಗಟ್ಟಿ ಮಾಹಿತಿ ನೀಡಿದ್ದರು.
ಆರೋಪಿಗಳಿಗೆ ಬಲೆ ಬೀಸಿದ ಪೋಲಿಸರು ಶನಿವಾರ ಮಂಜುಳಾ ರಾಮನಗಟ್ಟಿ, ಯಲ್ಲೇಶ್ ವಾಲಿಕಾರ, ಪರಶುರಾಮ ಕಾಂಬಳೆಯನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳ ಜೊತೆ ಇನ್ನೂ ನಾಲ್ವರು ಸೇರಿ ಉದ್ಯಮಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಆದರೆ ಉದ್ಯಮಿ ಬಸವರಾಜ ಪತ್ನಿ ದೂರು ದಾಖಲಿಸಿದ ಹಿನ್ನಲೆಯಲ್ಲಿ ಇಡೀ ಪ್ರಕರಣ ಬೆಳಕಿಗೆ ಬಂದಿದ್ದು ಬಂದಿತರಿಂದ ನಾಲ್ಕು ವಾಹನ 40 ಗ್ರಾಂ ಬಂಗಾರ ಸೇರಿ ಮೋಬೈಲ್ ವಶಕ್ಕೆ ಪಡೆದು ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಎಸ್ಪಿ ಭೀಮಾಶಂಕರ ಗುಳೆದ್ ಮಾಹಿತಿ ನೀಡಿದರು.
ಸತೀಶ್ ಜಾರಕಿಹೊಳಿ ಸ್ಪಷ್ಟನೆ : ನಮ್ಮ ಆಪ್ತರು ಇದ್ದರೆ ಇರಬಹುದು. ಇಲ್ಲ ಎಂದು ಹೇಳಲಾಗಲ್ಲ. ನಾವೇನು ಕಿಡ್ನ್ಯಾಪ್ ಮಾಡಲು ಹೇಳಿರುವುದಿಲ್ಲ. ಆವರ ವೈಯಕ್ತಿಕ ಸಮಸ್ಯೆ. ಈ ರೀತಿಯ ಸಮಸ್ಯೆ ಬಂದಾಗ ಪೋಟೋ ಹರಿದಾಡುತ್ತವೆ. ಪ್ರತಿದಿನ ನೂರು ಜನ ಬಂದು ಪೋಟೋ ತಗಿಸುತ್ತಾರೆ. ಯಾರು ಎಂದು ನೋಡಲು ಆಗುವುದಿಲ್ಲ. ಈಗಾಗಲೇ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ.


